ಕಾರ್ಕಳ: ತಂಬಾಕು ನಿಯಂತ್ರಣ ತನಿಖಾ ತಂಡದ ದಾಳಿ
ಉಡುಪಿ, ನ.21: ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವ್ಯಾಪ್ತಿ ಪ್ರದೇಶಗಳಲ್ಲಿರುವ ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ದಾಳಿ ನಡೆಸಿ ಒಟ್ಟು 24 ಪ್ರಕರಣ ದಾಖಲಿಸಿ 4100ರೂ. ದಂಡ ವಸೂಲಿ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದ್ದು, ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಇವುಗಳ ಉಲ್ಲಂಘನೆಗೆ ದಂಢವಿಧಿಸಲಾಗುವುದು. ವಿದ್ಯಾ ಸಂಸ್ಥೆಯ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.
ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ್, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಕಾರ್ಕಳದ ಹಿರಿಯ ಆರೋಗ್ಯ ಸಹಾಯಕ ಶಿವರಾಮ ಭಟ್, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಕಾರ್ಕಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿದ್ದಪ್ಪ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಎನ್ಟಿಸಿಪಿ ಜಿಲ್ಲಾ ಸಲಹೆಗಾರ ರಾದ ಮಂಜುಳಾ ಶೆಟ್ಟಿ, ಸಮಾಜಕಾರ್ಯಕರ್ತೆ ಶೈಲಾ ಶಾಮನೂರು, ಕಾರ್ಕಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಧು ಹಾಗೂ ಇತರರು ಭಾಗವಹಿಸಿದ್ದರು.