ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ನಿರ್ಮಾಣಕ್ಕೆ 2 ಸಾವಿರ ಎಕರೆ ಕಬ್ಬು ಬೆಳೆಸುವ ಗುರಿ: ಸುಪ್ರಸಾದ್ ಶೆಟ್ಟಿ
ಬ್ರಹ್ಮಾವರ, ನ.22: ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಪುನನಿರ್ಮಾಣ ಯೋಜನೆಗೆ ಪೂರಕವಾಗಿ ಉಡುಪಿ -ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಸಾಲಿನಲ್ಲಿ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ನ.21ರಂದು ಕಾರ್ಖಾನೆಯ ಕಾರ್ಯಾಲಯದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ರೈತರ ಮತ್ತು ಹಿತಚಿಂತಕರ ಸಭೆಯನ್ನು ಸಂಘಟಿಸಿ ವ್ಯಾಪಕವಾಗಿ ಕಬ್ಬು ಬೆಳೆಸಲು ಮನವೊಲಿಸುವ ಮೂಲಕ ರೈತರ ಜೀವನಾಡಿಯಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಸಕ್ಕರೆ ಕಾರ್ಖಾನೆಯ ಬಹುತೇಕ ಸಾಲಗಳನ್ನು ಅತಿ ಶೀಘ್ರದಲ್ಲಿ ಮುಕ್ತಗೊಳಿಸಲಾಗುವುದು. ಸಕ್ಕರೆ ಕಾರ್ಖಾನೆಗೆ ಶಾಶ್ವತ ಆದಾಯ ತರುವ ಮೂಲಕ್ಕೆ ಯೋಜನೆ ಹಾಕಲಾಗುವುದು. ನಿರಂತರ ರೈತರೊಂದಿಗೆ ಸಂಪರ್ಕ, ಸಾರ್ವ ಜನಿಕ ಸಮಾಲೋಚನಾ ಸಭೆ, ಸದಸ್ಯತ್ವ ಅಭಿಯಾನ, ಪಾಲು ಬಂಡವಾಳ ಸಂಗ್ರಹ ಹಾಗೂ ಜನಾಂದೋಲನದ ಮೂಲಕ ಶೀಘ್ರ ಕಾರ್ಖಾನೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಆಡಳಿತ ನಿರ್ದೇಶಕರಾದ ಪ್ರವೀಣ್ ನಾಯಕ್, ಉಪಾಧ್ಯಕ್ಷ ಶಾನಾಡಿ ಉಮಾನಾಥ್ ಶೆಟ್ಟಿ, ನಿರ್ದೇಶಕರಾದ ಆಸ್ತಿಕ ಶಾಸ್ತ್ರಿ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಸನ್ಮತ್ ಕುಮಾರ್ ಹೆಗ್ಡೆ ಜನ್ನಾಡಿ, ರತ್ನಾಕರ ಗಾಣಿಗ ಬಳ್ಕೂರು, ಗೀತಾ ಶಂಭು ಪೂಜಾರಿ, ಹೇಮಲತಾ ಯು.ಶೆಟ್ಟಿ, ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.