ಮಕ್ಕಳನ್ನು ಕೇಂದ್ರವಾಗಿಟ್ಟು ಸಾಹಿತ್ಯ ಬೆಳೆಸುವುದು ಅಗತ್ಯ: ಉಪೇಂದ್ರ ಸೋಮಯಾಜಿ
ಶಿರ್ವ, ನ.23: ಪುಸ್ತಕಗಳನ್ನು ಓದುವ, ಉಪನ್ಯಾಸ ಕೇಳುವ, ಮನನ ಮಾಡು ವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮಕ್ಕಳನ್ನು ಕೇಂದ್ರ ವಾಗಿರಿಸಿ ಅವರಿಗೆ ಸಾಹಿತ್ಯದ ಕಾರ್ಯ ಮಾಡಿದರೆ ಅದು ಸಮಾಜಕ್ಕೆ ಕೊಡುವ ಮಹತ್ತರ ಕೊಡುಗೆಯಾಗಿದೆ. ಪ್ರಾಮಾಣಿಕ ಪ್ರಯತ್ನಕ್ಕೆ ಸೋಲು ಎಂಬುವುದಿಲ್ಲ. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯ ಬೆಳೆಸಬೇಕು ಎಂದು ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಪು ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ರವಿವಾರ ಜರಗಿದ ಕನ್ನಡ ದೀಪೋತ್ಸವ ಸಂಭ್ರಮ ಹಾಗೂ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಸಾಹಿತ್ಯಪ್ರೇಮಿ, ಸಂಘಟಕ ಶಿರ್ವ ಹೊಸಅಂಗಡಿ ಶಿವಾನಂದ ಕಾಮತ್, ಗಂಗಾ ಕಾಮತ್ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತುತಿ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ನಾಡುನುಡಿ ಸಂಸ್ಕೃತಿ, ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಸೇವೆಸಸಲ್ಲಿಸುತ್ತಿರುವ ಜಿಲ್ಲೆಯ ಹಿರಿಯರನ್ನು ಗುರುತಿಸಿ, ಅವರ ಮನೆಯಲ್ಲಿಯೇ ಕೃತಜ್ಞತಾಪೂರ್ವಕ ವಾಗಿ ಗೌರವಿಸುವ ಪರಿಪಾಠ ಬೆಳೆಸಿಕೊಂಡಿದ್ದು, ಪ್ರತೀಯೊಬ್ಬ ಸಾಧಕನ ಸಾಧನೆ ಯನ್ನು ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯವನ್ನು ಜಿಲ್ಲಾ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ. ಭಾಸ್ಕರ ಶೆಟ್ಟಿ ಅಭಿನಂದಿಸಿದರು. ಖ್ಯಾತ ಗಾಯಕಿ ವಸಂತಿ ಆರ್.ಶೆಣೈ ಭಾವಗೀತೆಗಳನ್ನು ಹಾಡಿದರು. ಹರಿಕೃಷ್ಣ ಎನ್.ಭಟ್, ಗುರುಗಣೇಶ್ ಎನ್.ಭಟ್ ದಾಸರಪದ ಗಳನ್ನು ಹಾಡಿದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ, ಸದಸ್ಯರಾದ ಕೃಷ್ಣಕುಮಾರ್ ಮಟ್ಟು, ಸುದಕ್ಷಿಣೆ, ನಿವೃತ್ತ ಪ್ರಾಚಾರ್ಯ ಗಣಪತಿ ಭಟ್, ಅನಂತ ಮೂಡಿತ್ತಾಯ, ಕೆ.ಸುಂದರ ಪ್ರಭು, ದೇವೇಂದ್ರ ನಾಯಕ್, ರಮೇಶ್ ಶೆಣೈ, ದೀಪಕ್ ಕಾಮತ್, ರಮ್ಯಾ ಕಾಮತ್, ವನಿತಾ ಡಿ.ನಾಯಕ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ವಂದಿಸಿದರು.