ಪೊಕ್ಸೋ ಪ್ರಕರಣ: ಬಸ್ ಕ್ಲೀನರ್ ಮೇಲಿನ ಆರೋಪ ಸಾಬೀತು ; ನ.30ರಂದು ಶಿಕ್ಷೆ ಪ್ರಮಾಣ ಪ್ರಕಟ
ಉಡುಪಿ, ನ.24: ಆರು ವರ್ಷಗಳ ಹಿಂದೆ ಬಸ್ಸಿನಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪೊಕ್ಸೋ ಪ್ರಕರಣದ ಆರೋಪಿ ಬಸ್ ಕ್ಲೀನರ್ನನ್ನು, ದೋಷಿ ಎಂಬುದಾಗಿ ಉಡುಪಿ ಪೋಕ್ಸೋ ವಿಶೇಷ ನ್ಯಾಯಾಲಯವು ಮಂಗಳವಾರ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ನ.30ರಂದು ಪ್ರಕಟಿಸಲಿದೆ.
ಪ್ರಕರಣದ ಆರೋಪಿಯನ್ನು ಗುರು ಅಲಿಯಾಸ್ ಗುರುರಾಜ್ ಎಂದು ಗುರುತಿಸಲಾಗಿದೆ. ಈತ 2014ರಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿ ಯಲ್ಲಿ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ 16 ವರ್ಷ ಪ್ರಾಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿತ್ತು.
ಈ ಬಗ್ಗೆ ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ತನಿಖೆ ನಡೆಸಿದ ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ 21 ಸಾಕ್ಷಿಗಳ ಪೈಕಿ 11 ಮಂದಿ ಸಾಕ್ಷ ನುಡಿದಿದ್ದರು. ವಿಚಾರಣೆ ವೇಳೆ ಸಂತ್ರಸ್ತೆಯ ಹೇಳಿಕೆ ಸೇರಿದಂತೆ ಎಲ್ಲ ರೀತಿಯ ಸಾಕ್ಷಗಳನ್ನು ಪರಿಶೀಲಿಸಿದ ನ್ಯಾಯಾಧೀಶೆ ವನಮಾಲಾ ಆನಂದರಾವ್, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಆದೇಶ ನೀಡಿದರು.
ಮೊದಲಿಗೆ ಕುಂದಾಪುರದಲ್ಲಿರುವ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾ ಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು. ಬಳಿಕ ಪ್ರಕರಣವು ಉಡುಪಿಯ ಪೋಕ್ಸೋ ನ್ಯಾಯಾಲ ಯಕ್ಕೆ ವರ್ಗಾವಣೆ ಯಾಗಿದ್ದು ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿ ಕ್ಯೂಶನ್ ಪರ ವಾದ ಮಂಡಿಸಿದ್ದಾರೆ.