ಉಡುಪಿ: ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ
ಉಡುಪಿ, ನ.26: ಏಕಾದಶಿಯ ದಿನವಾದ ಇಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು.
ಗುರುವಾರ ಶ್ರೀಕೃಷ್ಣಮಠದಲ್ಲಿ ನಾಲ್ಕು ತಿಂಗಳ ಚಾತುರ್ಮಾಸ್ಯ ವ್ರತ ಸಮಾಪ್ತಿಯಾಗಿದ್ದು, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ಸ್ವಾಮೀಜಿ ಹಾಗೂ ಪರ್ಯಾಯ ಶ್ರೀಈಶಪ್ರಿಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತ ಮುದರಂಗಡಿ ಲಕ್ಷ್ಮೀಶ ಆಚಾರ್ಯ ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು.
ಬಳಿಕ ಪೇಜಾವರ ಸ್ವಾಮೀಜಿ ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಸ್ವಾಮೀಜಿಗೆ ಮುದ್ರಾಧಾರಣೆ ಮಾಡಿದರು. ಅನಂತರ ಪರ್ಯಾಯಶ್ರೀ ರಾಜಾಂಗಣದಲ್ಲಿ ಕಾದಿದ್ದ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
ತಪ್ತ ಮುದ್ರಾಧಾರಣೆ ಪೂರ್ವಾಹ್ನ 11ರಿಂದ ಮಧ್ಯಾಹ್ನ 12:30ರವರೆಗೆ ನಡೆಯಿತು. ಇದರಲ್ಲಿ ಭಾಗವಹಿಸುವ ಭಕ್ತರು ಸುರಕ್ಷತಾ ಅಂತರವನ್ನು ಕಾಯ್ದು ಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ನ್ನು ಉಪಯೋಗಿಸುವ ಮೂಲಕ ಸರಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದರೂ ಹೆಚ್ಚಿನವರು ಇದನ್ನು ಪಾಲಿಸುವತ್ತ ಗಮನ ಹರಿಸಲಿಲ್ಲ.
ಚಾತುರ್ಮಾಸ ವ್ರತಾಚರಣೆ ಸಮಾಪ್ತಿ ಪ್ರಯುಕ್ತ ಗುರುವಾರ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ನಡೆಸಿದರು. ಕೃಷ್ಣ ಮಠದಲ್ಲಿ ತುಳಸಿಪೂಜೆಯು ಶುಕ್ರವಾರ ಬೆಳಗ್ಗೆ ನಡೆಯಲಿದೆ.
ಲಕ್ಷದೀಪೋತ್ಸವ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಲಕ್ಷದೀಪೋತ್ಸವ ನಡೆಯಲಿದೆ. ಈ ಮೂಲಕ ಉಡುಪಿ ಶ್ರೀಕೃಷ್ಣ ಮಠದಲ್ಲಿ ಉತ್ಸವಗಳ ಸರಣಿ ಪ್ರಾರಂಭಗೊಳ್ಳಲಿದೆ.
ನಾಳೆ ಮಧ್ವಮಂಟಪದಲ್ಲಿ ಕ್ಷೀರಾಬ್ದಿ ಪೂಜೆ ನಡೆದ ಬಳಿಕ ಉತ್ಸವ ಮೂರ್ತಿಗಳನ್ನು ಹೊರತರಲಾಗುತ್ತದೆ. ಸಂಜೆ ಮಠ, ಮಧ್ವಸರೋವರ,ಲಕ್ಷ ದೀಪೋತ್ಸವ ನಡೆಯುತ್ತದೆ