ಸಂವಿಧಾನ ಒಪ್ಪದವರು ದೇಶ ಬಿಟ್ಟು ತೊಲಗಲಿ: ಜಯನ್ ಮಲ್ಪೆ
ಮಲ್ಪೆ, ನ.26: ಪ್ರಜೆಗಳಲ್ಲಿ ತೀವ್ರ ಮಟ್ಟದ ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುವುದಕ್ಕಾಗಿ ರಣಕಹಳೆ ಊದುವ ನಾಯಕರ ಬಗ್ಗೆ ಎಚ್ಚರಿಕೆ ವಹಿಸಿ, ದೇಶಭಕಿ ಎನ್ನುವುದು ಎರಡಲಗಿನ ಖಡ್ಗವಿದ್ದಂತೆ. ಹೀಗಾಗಿ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ತೊಲಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಗುರುವಾರ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ‘ಭಾರತದ ಸಂವಿಧಾನ ಅರ್ಪಣಾ ದಿನ’ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನ ಎಂದರೆ ಮೀಸಲಾತಿ ಎಂದು ನಮ್ಮ ದೇಶದ ಬಹುತೇಕ ಜನರು ತಿಳಿದುಕೊಂಡಿದ್ದಾರೆ. ಇದು ತಪ್ಪು ಕಲ್ಪನೆ. ಸಂವಿಧಾನದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದ ಎಲ್ಲ ಜಾತಿ, ಧರ್ಮದವರಿಗೆ ವಿಶೇಷ ಸೌಲಭ್ಯ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಮಹಿಳೆಯರಿಗೆ ಘನತೆಯನ್ನು ತಂದು ಕೊಟ್ಟಿದ್ದೆ ನಮ್ಮ ಸಂವಿಧಾನ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು ಮಾತನಾಡಿ, ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುವುದೋ ಅಲ್ಲಿಯವರೆಗೆ ನಾವೆಲ್ಲರು ಸುರಕ್ಷಿತ. ಇಲದಿದ್ದರೆ ನಾವೆಲ್ಲರೂ ನಾಶವಾಗುತ್ತೇವೆ. ಆದ್ದರಿಂದ ಸಂವಿಧಾನದ ರಕ್ಷಣೆ ನಮ್ಮ ಹೊಣೆ ಎಂದರು.
ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಯುವಸೇನೆಯ ಉಪಾದ್ಯಕ್ಷ ಮಂಜುನಾಥ ಕಪ್ಪೆಟ್ಟು, ಸುಮಿತ್ ಮಲ್ಪೆ, ಕೃಷ್ಣ ಶ್ರೀಯಾನ್, ಸಂತೋಷ್ ಕಪ್ಪೆಟ್ಟು ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಗುಣವಂತ ತೊಟ್ಟಂ, ಮಂಜುನಾಥ ಅಮ್ಮುಂಜೆ, ಪ್ರಶಾಂತ್ ಕಾಂಚನ್ ನೆರ್ಗಿ, ಹರೀಶ್ ಅಮೀನ್, ಕೃಷ್ಣ ಬಂಗೇರ, ರಾಮೋಜಿ ಅಮೀನ್ ಕೊಳ, ಲಕ್ಮಣ ನೆರ್ಗಿ, ನಿಹಾಲ್, ಯಶೋದಾ ನೆರ್ಗಿ ಮುಂತಾದವರು ಉಪಸ್ಥಿತರಿದ್ದರು.
ಯುವಸೇನೆಯ ಪ್ರಸಾದ್ ನೆರ್ಗಿ ಸ್ವಾಗತಿಸಿದರು. ಸುಶೀಲ್ಕುಮಾರ್ ಕೊಡವೂರು ವಂದಿಸಿದರು. ಭಗವಾನ್ ನೆರ್ಗಿ ಕಾರ್ಯಕ್ರಮ ನಿರೂಪಿಸಿದರು.