ಮಂಗಳೂರು ವಿಮಾನನಿಲ್ದಾಣಕ್ಕೆ ‘ಶ್ರೀಮಧ್ವಶಂಕರ’ ನಾಮಕರಣ ಮಾಡುವಂತೆ ಪುತ್ತಿಗೆ ಶ್ರೀ ಒತ್ತಾಯ
ಉಡುಪಿ, ನ.26: ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವಶಂಕರ ಎಂಬ ಹೆಸರು ಇಡಬೇಕು ಎಂದು ಉಡುಪಿಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಭಾರತವನ್ನು ವಿಶ್ವಗುರುವನ್ನಾಗಿ ಕಾಣಲು ನಾವೆಲ್ಲರು ಕನಸು ಕಾಣುತ್ತಿದ್ದೇವೆ. ಈ ದೃಷ್ಠಿಯಲ್ಲಿ ಈಗಾಗಲೇ ದಾರ್ಶನಿಕವಾಗಿ ಹಾಗೂ ಮೇರು ಗುರುಗಳಾಗಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವ ಶ್ರೀಮಧ್ವಾಚಾರ್ಯರು, ಶ್ರೀಶಂಕರಾಚಾರ್ಯರ ಹೆಸರು ಈ ವಿಮಾನ ನಿಲ್ದಾಣಕ್ಕೆ ಇಟ್ಟರೆ ದೇಶಕ್ಕೆ ಹೆಮ್ಮೆ ಆಗುತ್ತದೆ. ಆ ಮೂಲಕ ನಮ್ಮ ವಿಶ್ವಗುರುತ್ವವನ್ನು ಪ್ರಸ್ತುತ ಪಡಿಸಬಹುದಾಗಿದೆ ಎಂದು ಅವರು ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರ ಭಾರತವು ದೇವತೆ ದೇವರಗಳ ಆವತಾರದ ಭೂಮಿಯಾದರೆ ದಕ್ಷಿಣ ಭಾರತವು ಆಚಾರ್ಯರ ಆವತಾರದ ಭೂಮಿಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಮುಖವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರ ಹೆಸರು ಇಡುವುದು ಸೂಕ್ತ ವಾಗಿದೆ. ಅದರ ಜೊತೆಗೆ ಇತರ ವಿಮಾನ ನಿಲ್ದಾಣಗಳಿಗೂ ಅಲ್ಲಿನ ದಾರ್ಶನಿಕರ ಹೆಸರು(ಬಸವಣ್ಣ, ಶ್ರೀರಾಮ ನುಜಾಚಾರ್ಯ)ಗಳನ್ನು ಪ್ರಸ್ತುತ ಪಡಿಸಿದರೆ ಭಾರತವನ್ನು ವಿಶ್ವಗುರುವನ್ನಾಗಿ ಕಾಣಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.