ಸಹಾಯ ಮಾಡುವ ನೆಪದಲ್ಲಿ ಚಿನ್ನ ಅಪಹರಿಸಿದ ದುಷ್ಕರ್ಮಿ
ಮಂಗಳೂರು, ನ.27: ನಗರದ ಬಿಜೈ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆಯ ತಪ್ಪಿ ಬಿದ್ದ ಹಿರಿಯ ನಾಗರಿಕರೊಬ್ಬರಿಗೆ ಅಪರಿಚಿತನೋರ್ವ ಸಹಾಯ ಮಾಡುವವನಂತೆ ನಟಿಸಿ 40 ಸಾವಿರ ರೂ. ಮೌಲ್ಯದ 20 ಗ್ರಾಂ. ಚಿನ್ನ ಇದ್ದ ಬ್ಯಾಗ್ ಅಪಹರಿಸಿದ ಘಟನೆ ನಡೆದಿದೆ.
ಗುಣಪಾಲನ್ ಎಂಬವರು ಮಡಿಕೇರಿಗೆ ಹೋಗಲು ಬಿಜೈ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ವಿಚಾರಿಸಿದ ಬಳಿಕ ಹೊರಗಡೆ ಬರುತ್ತಿದ್ದಾಗ ಮೆಟ್ಟಿಲುಗಳ ಬಳಿ ಜಾರಿ ಬಿದ್ದಿದ್ದಾರೆ. ಅಲ್ಲಿದ್ದ್ದ ರಿಕ್ಷಾ ಚಾಲಕರು ಉಪಚರಿಸಿದ ಬಳಿಕ ಗುಣಪಾಲನ್ ರಸ್ತೆ ಬದಿಯ ರಿಕ್ಷಾ ಪಾರ್ಕ್ಗೆ ಬಂದಿದ್ದಾರೆ.
ಈ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ಅವರಿಗೆ ಸಹಾಯ ಮಾಡುವವರಂತೆ ನಟಿಸಿ ಕೆಂಪು ಬಣ್ಣದ ಬ್ಯಾಗ್ನ್ನು ಹಿಡಿದುಕೊಂಡು ಫುಡ್ ಪ್ಯಾಲೇಸ್ ಬಾರ್ಗೆ ಕರೆದೊಯ್ದು ಮದ್ಯ ಕುಡಿಸಿದ್ದಾನೆ. ಬಳಿಕ ಬಾರ್ನಿಂದ ಹೊರಬಂದು ಅಂಗಡಿಯೊಂದರ ಬಳಿ ಗುಣಪಾಲನ್ ಅವರನ್ನು ಕುಳ್ಳಿರಿಸಿ ಬ್ಯಾಗ್ನೊಂದಿಗೆ ಪರಾರಿಯಾಗಿದ್ದಾನೆ. ಬ್ಯಾಗ್ನಲ್ಲಿ ಚಿನ್ನದ ಸರ ಹಾಗೂ ನವಿಲಿನ ಡಿಸೈನ್ ಇರುವ ಬೆರಳು ಉಂಗುರ ಇದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.