ಜನಪ್ರತಿನಿಧಿಗಳಿಂದ ಬಂಟ ಸಮುದಾಯದ ನಿರ್ಲಕ್ಷ್ಯ : ಐಕಳ ಹರೀಶ್ ಶೆಟ್ಟಿ
ಒಕ್ಕೂಟದಿಂದ 80ಲಕ್ಷ ರೂ. ಮೌಲ್ಯದ ಸಹಾಯಹಸ್ತ ವಿತರಣೆ
ಉಡುಪಿ, ನ. 29: ಸಮುದಾಯದಿಂದ ಪ್ರಯೋಜನ ಪಡೆದುಕೊಂಡ ಜನ ಪ್ರತಿನಿಧಿಗಳು ಗೆದ್ದ ಮೇಲೆ ಕಡೆಗಣನೆ ಮಾಡುತ್ತಿದ್ದಾರೆ. ಇದರಿಂದಾಗಿ ಸಮು ದಾಯವು ಸರಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತವಾಗುತ್ತಿವೆ. ಇದರ ವಿರುದ್ಧ ಮುಂದಿನ ದಿನ ಗಳಲ್ಲಿ ವ್ಯವಸ್ಥಿತ ಹೋರಾಟ ರೂಪಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ವತಿಯಿಂದ ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ದಲ್ಲಿ ರವಿವಾರ ಆಯೋಜಿಸಲಾದ ವಿದ್ಯಾರ್ಥಿ ಸಹಾಯಧನ, ಗೃಹ ನಿರ್ಮಾಣ, ಮನೆ ರಿಪೇರಿ, ವೈದ್ಯಕೀಯ, ಮದುವೆಗೆ ನೆರವು ಸೇರಿದಂತೆ ಸಮಾಜ ಕಲ್ಯಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೆಸ್ಸೆಸ್ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ದೇಶದಲ್ಲಿ ನೂರಾರು ವರ್ಷಗಳಿಂದ ಚಾಲ್ತಿ ಯಲ್ಲಿದ್ದ ಮೆಕಾಲೇ ಶಿಕ್ಷಣದಿಂದಾಗಿ ನಮ್ಮ ಆಚಾರ, ವಿಚಾರ, ಸಂಸ್ಕೃತಿ ಬಡ ವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ, ಋಷಿ ಪರಂಪರೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಗಳಿಕೆಯಲ್ಲಿ ಸಮಾಜಕ್ಕೆ ಮಾಡುವ ದಾನಧರ್ಮ ಶಾಶ್ವತವಾಗಿ ಉಳಿಯುತ್ತದೆ. ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಬಂಟ ಸಮುದಾಯದ ಈ ಸಮಾಜಮುಖಿ ಕೆಲಸಕ್ಕೆ ನನ್ನ ಪ್ರೋತ್ಸಾಹ ಸದಾ ಕಾಲ ಇರುತ್ತದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಸುಮೋದರ ಶೆಟ್ಟಿ ಚೆಲ್ಲಡ್ಕ ಹಾಗೂ ಸರಿತಾ ಕೆ.ಡಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶೈಲೇಂದ್ರ ಸಕ್ಸೇನ ಬರೆದ, ಡಾ.ಜಿ.ಭಾಸ್ಕರ ಮಯ್ಯ ಕನ್ನಡಕ್ಕೆ ಅನುವಾದಿಸಿರುವ ‘ಸಾಧನೆಯ ಪ್ರತಿ ಮೂರ್ತಿ ತಪೋವನೀ ಮಾ ಕಡಲತಡಿಯಿಂದ ಹಿಮಗಿರಿಯ ತನಕ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಶಾಸಕರಾದ ಕೆ. ರಘುಪತಿ ಭಟ್, ವಿ.ಸುನಿಲ್ ಕುಮಾರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಪ್ರಮುಖರಾದ ಸುಧಾಕರ್ ಹೆಗ್ಡೆ, ರಂಜನಿ ಸುಧಾಕರ್ ಹೆಗ್ಡೆ, ಸಂತೋಷ ಶೆಟ್ಟಿ ಇನ್ನಾ, ಗುರ್ಮೆ ಸುರೇಶ್ ಶೆಟ್ಟಿ, ಅಜಿತ್ ಚೌಟ, ಸುಧಾಕರ್ ಶೆಟ್ಟಿ ಹುತ್ತುರ್ಕೆ, ಕೃಷ್ಣ ವೈ.ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಪುರುಷೋತ್ತಮ್ ಪಿ.ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಮಹೇಶ್ ಶೆಟ್ಟಿ ಪಡುಬಿದ್ರೆ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್ ಕಾರ್ಯಕ್ರಮ ನಿರೂಪಿಸಿದರು.