ಮೂಲತ್ವ ವಿಶ್ವ ಪ್ರಶಸ್ತಿ 2020 ಪ್ರದಾನ
ಮಂಗಳೂರು, ನ. 29: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ‘ಮೂಲತ್ವ ವಿಶ್ವ ಪ್ರಶಸ್ತಿ 2020’ ಪ್ರದಾನ ಕಾರ್ಯ ಕ್ರಮವು ರವಿವಾರ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 50,001 ರೂ. ನಗದು, ಶಾಲು, ಪ್ರಶಸ್ತಿ ಪತ್ರ, ಸ್ಮರಣಿಕೆ, ಪೇಟವನ್ನು ಒಳಗೊಂಡಿದೆ.
ಕಟಪಾಡಿಯ ಸಮಾಜ ಸೇವಾ ಕಾರ್ಯಕರ್ತ ಹಾಗೂ ‘ರವಿ ಫ್ರೆಂಡ್ಸ್’ ನ ಸ್ಥಾಪಕ ರವಿ ಕಟಪಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಜೀವನದಲ್ಲಿ ಹಣ ಸಂಪಾದನೆ ಮುಖ್ಯವಲ್ಲ. ಜನರ ಪ್ರೀತಿ, ವಿಶ್ವಾಸವನ್ನು ಸಂಪಾದನೆ ಮುಖ್ಯ. ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ತಾನು ಸ್ನೇಹಿತರ ಜತೆಗೂಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ವಿತರಿಸುತ್ತಿದ್ದೇನೆ. ಕಳೆದ 6 ವರ್ಷಗಳಲ್ಲಿ 54.5 ಲಕ್ಷ ರೂ. ಸಂಗ್ರಹಿಸಿ 28 ಮಕ್ಕಳ ಚಿಕಿತ್ಸೆಗೆ ನೀಡಿದ್ದೇನೆ. ಜನರು ನನ್ನ ಮೇಲೆ ವಿಶ್ವಾಸ ಇರಿಸಿದ್ದು, ಉದಾರವಾಗಿ ನೆರವಾಗುತ್ತಿದ್ದಾರೆ. ಇದೇ ರೀತಿ 1 ಕೋ.ರೂ. ನೆರವು ಒದಗಿಸುವ ಉದ್ದೇಶ ಹೊಂದಿದ್ದು, ಕೈಕಾಲು ಗಟ್ಟಿ ಇರುವ ತನಕ ಮತ್ತು ಸ್ನೇಹಿತರು ಸಹಕಾರ ಕೊಡುವ ತನಕ ಈ ಸೇವಾ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದರು.
ದಾಯ್ಜಿ ವರ್ಲ್ಡ್ ಸಂಸ್ಥೆಯ ಸ್ಥಾಪಕ ವಾಲ್ಟರ್ ನಂದಳಿಕೆ, ಸಿವಿಲ್ ಕಂಟ್ರಾಕ್ಟರ್ ಪುರುಷೋತ್ತಮ ಕೊಟ್ಟಾರಿ, ವಿಕಾಸ್ ಕಾಲೇಜಿನ ಡೀನ್ ಡಾ. ಮಂಜುಳಾ ಅನಿಲ್ ರಾವ್, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಡಿ’ಸೋಜಾ, ಲಕ್ಷ್ಮೀಶ ಕೋಟ್ಯಾನ್, ಪ್ರಶಸ್ತಿಯ ಸಂಚಾಲಕ ಹರೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ರಾಜ್ಮೋಹನ್ ರಾವ್ ಅಭಿನಂದನಾ ಪತ್ರ ವಾಚಿಸಿದರು.
ಹರೀಶ್ ಪೂಜಾರಿ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.