ಎಸ್ಸೆಸ್ಸೆಫ್ ಹೊಸೂರು ಶಾಖೆ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ
ಸೋಮವಾರಪೇಟೆ : ರಕ್ತದಾನವೆಂಬುದು ಜೀವದಾನಕ್ಕೆ ಸಮಾನವಾಗಿದ್ದು ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡಲು ಮುಂದಾಗಬೇಕು, ರಕ್ತದಾನವು ನಮ್ಮ ಶರೀರಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಮಾತ್ರವಲ್ಲ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವೂ ಕೂಡ ಹೌದು, ಹಲವಾರು ಆಸ್ಪತ್ರೆಗಳಲ್ಲಿ ರೋಗಿಗಳು ರಕ್ತ ಸಿಗದೆ ಜೀವನ್ಮರಣ ಹೋರಾಟ ನಡೆಸುತ್ತಿರುವುದು ರಕ್ತದಾನ ಶಿಬಿರಗಳ ಅನಿವಾರ್ಯತೆಯನ್ನು ತೋರಿಸುತ್ತಿದೆ ಎಂದು ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ರವರು ಹೇಳಿದರು.
ಕೊಡಗು ಜಿಲ್ಲಾ ಎಸ್ಎಸ್ಎಫ್ ಬ್ಲಡ್ ಸೈಬೋ ವತಿಯಿಂದ ಜೀವರಕ್ಷ ರಕ್ತನಿಧಿ ಹಾಸನ ಹಾಗೂ ಎಸ್ಎಸ್ಎಫ್ ಹೊಸೂರು ಶಾಖೆಯ ಸಹಯೋಗದೊಂದಿಗೆ ನಡೆದ ಸಾರ್ವಜನಿಕ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್ಎಸ್ಎಫ್ ರಾಜ್ಯದಾದ್ಯಂತ ನಡೆಸಿರುವ ಇನ್ನೂರಕ್ಕೂ ಮಿಕ್ಕ ರಕ್ತದಾನ ಶಿಬಿರಗಳು ಸಮಾಜಕ್ಕೆ ಉದಾತ್ತ ಕೊಡುಗೆಯಾಗಿದ್ದು ಸಂಸ್ಥೆಯ ಕಾರ್ಯವೈಖರಿಗಳನ್ನು ಶ್ಲಾಘಿಸಿದರು.
ಎಸ್ಎಸ್ಎಫ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಸಮಾರಂಭದ ಅಧ್ಯಕ್ಷತೆ ವಹಿಸಿ ಎಸ್ಎಸ್ಎಫ್ ಯಾವುದೇ ಸಂದರ್ಭದಲ್ಲೂ ರೋಗಿಗಳಿಗೆ ರಕ್ತಗಳನ್ನು ನೀಡಲು ಸದಾ ಸಿದ್ಧವಾಗಿದೆ ಎಂದರು. ಉದ್ಘಾಟನೆಯನ್ನು ಎಸ್ ವೈ ಎಸ್ ಸೋಮವಾರಪೇಟೆ ಸೆಂಟರ್ ಅಧ್ಯಕ್ಷರಾದ ಅಲಿ ಸಖಾಫಿ ನಿರ್ವಹಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಹಮ್ಮದ್ ಫಾಳಿಲಿ, ಹಾಸನದ ಜೀವರಕ್ಷ ರಕ್ತನಿಧಿಯ ಪ್ರಕಾಶ್, ನಾಡಿನ ಮುಖಂಡರಾದ ಶ್ರೀ ರಾಮೇಗೌಡ, ಪುಟ್ಟೇಗೌಡ, ಶಾಂತಮಲ್ಲಪ್ಪ, ಬಾಲಕೃಷ್ಣ ಶೆಟ್ಟಿ , ಅಶ್ವತ್ಥ್, ಜಮಾಅತ್ ಅಧ್ಯಕ್ಷರಾದ ಆದಂ, ಯಸಳೂರು ಠಾಣಾಧಿಕಾರಿಗಳಾದ ಮಂಜುನಾಥ್, ಅಕ್ಮಲ್ ಶನಿವಾರಸಂತೆ, ಮುಂತಾದ ಗಣ್ಯರು ಭಾಗವಹಿಸಿದ್ದರು.
ಕೊಡಗು ಜಿಲ್ಲಾ ಎಸ್ಎಸ್ಎಫ್ ಬ್ಲಡ್ ಸೈಬೋ ಜಿಲ್ಲಾ ಮುಖ್ಯಸ್ಥರು ಹಾಗೂ ಹೊಸೂರು ಜಮಾಅತಿನ ಶಾಫಿ ಸಅದಿ ಸೋಮವಾರಪೇಟೆ ಅವರು ಮಾತನಾಡಿ ಎಸ್ಎಸ್ಎಫ್ ಎಂದಿಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಜಾತಿ ಧರ್ಮ ಪಂಗಡಗಳ ಭೇದಭಾವವಿಲ್ಲದೆ ಕಾರ್ಯಾಚರಿಸುತ್ತಿದೆ ಎಂದರು.
ಶಾಫಿ ಸಅದಿರವರಿಗೆ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು.
ಶಿಬಿದಲ್ಲಿ 50ರಷ್ಟು ರಕ್ತದಾನಿಗಳು ರಕ್ತದಾನ ಮಾಡಿದರು. ಸಮಾರಂಭಕ್ಕೆ ಶಾಖಾ ಅಧ್ಯಕ್ಷರಾದ ಅಝರುದ್ದೀನ್ ಸ್ವಾಗತ ಮಾಡಿ ಹಸೈನಾರ್ ಮುಸ್ಲಿಯಾರ್ ಕಾಜೂರು ವಂದಿಸಿದರು.