ರಾಷ್ಟ್ರ ಮಟ್ಟದ ಸಿನಿಮಾ ವಿಮರ್ಶಾ ಸ್ಪರ್ಧೆ: ದ.ಕ ಜಿಲ್ಲೆಯ ಅಶ್ವಿನಿ ಜೈನ್ ದ್ವಿತೀಯ
ಬೆಳ್ತಂಗಡಿ: ಫಿಪ್ರೆಸಿ ಇಂಡಿಯಾ ಸಂಸ್ಥೆಯು ಖ್ಯಾತ ಭಾರತೀಯ ಸಿನಿಮಾ ನಿರ್ಮಾಪಕ, ಸಿನಿಮಾ ವಿಮರ್ಶಕ ಹಾಗೂ ಕೊಲ್ಕತ್ತಾ ಫಿಲ್ಮ್ ಸೊಸೈಟಿಯ ಸ್ಥಾಪಕರಾಗಿದ್ದ ಚಿದಾನಂದ ದಾಸ್ ಗುಪ್ತ ಸ್ಮರಣಾರ್ಥ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಿನಿಮಾ ವಿಮರ್ಶಾ ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಬಿ.ವೊಕ್ ಡಿಜಿಟಲ್ ಫಿಲ್ಮ್ ಮೇಕಿಂಗ್ ಕೋರ್ಸ್ ನ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಜೈನ್ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಮಲಯಾಳಂ ಸಿನಿಮಾ ಕುಂಬಳಂಗಿ ನೈಟ್ಸ್ ಕುರಿತು ಅಶ್ವಿನಿ ಜೈನ್ ಬರೆದ ವಿಮರ್ಶಾ ಲೇಖನಕ್ಕೆ ಈ ಮನ್ನಣೆ ಪ್ರಾಪ್ತವಾಗಿದೆ. ಈ ಬಹುಮಾನಿತ ವಿಮರ್ಶಾ ಲೇಖನ ಇ-ಸಿನಿ-ಇಂಡಿಯಾ ಆನ್ಲೈನ್ ನಿಯತಕಾಲಿಕೆಯ ಅಕ್ಟೋಬರ್ – ಡಿಸೆಂಬರ್ 2020ರ ತ್ರೈ ಮಾಸಿಕ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ.
ಚಲನಚಿತ್ರ ವಿಮರ್ಶಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಯಂತನ್ ದತ್ತ ಮತ್ತು ವೇದಾಂತ ಶ್ರೀನಿವಾಸ ಹಂಚಿಕೊಂಡಿದ್ದಾರೆ. ಸಯಂತನ್ ದತ್ತ ಅವರು ಸನಲ್ ಕುಮಾರ್ ಶಶಿಧರನ್ ನಿರ್ದೇಶನದ ಮಲಯಾಳಂನ ಚೋಳ ಚಿತ್ರದ ವಿಮರ್ಶೆಗಾಗಿ ಮತ್ತು ವೇದಾಂತ ಶ್ರೀನಿವಾಸ್ ಅವರು ಅಸ್ಸಾಂ ಭಾಷೆಯ ಭಾಸ್ಕರ್ ಹಜಾರಿಕ ನಿರ್ದೇಶನದ ಆಮಿಸ್ ಎಂಬ ಚಿತ್ರದ ವಿಮರ್ಶೆಗಾಗಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.