ಜಮಾಅತೆ ಇಸ್ಲಾಮೀ ಹಿಂದ್ನಿಂದ ಪ್ರಬಂಧ ಸ್ಪರ್ಧೆ
ಉಡುಪಿ, ಡಿ. 2: ಪ್ರವಾದಿ ಮುಹಮ್ಮದ್(ಸ)ರ ಜೀವನ ಹಾಗೂ ಸಂದೇಶವನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ, ಪರಸ್ಪರರನ್ನು ಅರಿಯುವ, ಹೃದಯಗಳನ್ನು ಬೆಸೆಯುವ ಉದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯದ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ವಕೀಲರು, ಪತ್ರಕರ್ತರು ಹಾಗೂ ಶಿಕ್ಷಕರಿಗಾಗಿ ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿಯ ಮುಹಮ್ಮದ್ ಇದ್ರೀಸ್ ಹೂಡೆ ಈ ವಿಷಯ ತಿಳಿಸಿದರು. ಪ್ರಬಂಧ ಸ್ಪರ್ಧೆಗೆ ವಿಷಯ ‘ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್ (ಸ)ರ ಕೊಡುಗೆ’. ಇದೇ ಡಿ.10 ಪ್ರಬಂಧ ಕಳುಹಿಸಲು ಕೊನೆಯ ದಿನವಾಗಿದೆ ಎಂದವರು ತಿಳಿಸಿದರು.
ಪ್ರಬಂಧವು ಅಧ್ಯಯನಾತ್ಮಕ, ಸ್ವತಂತ್ರ ಹಾಗೂ ಸ್ವರಚಿತವಾಗಿರಬೇಕು. ಫುಲ್ಸ್ಕೇಲ್ ಬಿಳಿಹಾಳೆಯ ಒಂದೇ ಮಗ್ಗುಲಲ್ಲಿ ಎಂಟು ಪುಟಗಳಿಗಿಂತ ಮೀರಿರಬಾರದು. ಕನ್ನಡ ಭಾಷೆಗೆ ಆದ್ಯತೆ ಇದ್ದು, ಇಂಗ್ಲೀಷ್ ಹಾಗೂ ಉರ್ದು ಭಾಷೆಯಲ್ಲೂ ಕಳುಹಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿಗಳಿ ಗಾಗಿ ಮೊಬೈಲ್ ಸಂಖ್ಯೆ:9448300589ನ್ನು ಸಂಪರ್ಕಿಸಬಹುದು.
ಮೂರು ವಿಭಾಗದ ಮೊದಲ ಮೂವರು ವಿಜೇತರಿಗೆ ಕ್ರಮವಾಗಿ 15,000ರೂ., 10,000ರೂ ಹಾಗೂ 5,000ರೂ.ನಗದು ಬಹುಮಾನದೊಂ ದಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಇದ್ರೀಸ್ ಹೂಡೆ ತಿಳಿಸಿದರು.
ಪ್ರಬಂಧಗಳನ್ನು ಡಿ.10ರೊಳಗೆ ಪ್ರಬಂಧ ಸ್ಪರ್ಧಾ ಸಮಿತಿ, ಪ್ರವಾದಿ ಮುಹಮ್ಮದ್(ಸ) ಸೀರತ್ ಅಭಿಯಾನ-2, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು-575001 ಈ ವಿಳಾಸಕ್ಕೆ ಕಳುಹಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಶಬ್ಬೀರ್ ಮಲ್ಪೆ, ಪ್ರೊ.ಅಬ್ದುಲ್ ಅಝೀಜ್, ರಿಯಾಜ್ ಅಹ್ಮದ್ ಕುಕ್ಕಿಕಟ್ಟೆ, ಅಬ್ದುಲ್ ಅಝೀಜ್ ಉದ್ಯಾವರ ಉಪಸ್ಥಿತರಿದ್ದರು.