ಉಳ್ಳಾಲ ಬೋಟ್ ದುರಂತ : ನಾಲ್ಕು ದಿನ ಕಳೆದರೂ ಪತ್ತೆಯಾಗದ ಮೀನುಗಾರ
ಮಂಗಳೂರು, ಡಿ.4: ಅರಬ್ಬಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಆರು ಮಂದಿ ಮೀನುಗಾರರ ಪೈಕಿ ಇನ್ನೂ ಪತ್ತೆಯಾಗದೆ ಉಳಿದ ಒಬ್ಬ ಮೀನುಗಾರನಿಗಾಗಿ ಶೋಧ ಕಾರ್ಯ ಶುಕ್ರವಾರ ಮುಂದುವರಿದಿದೆ. ನಾಲ್ಕು ದಿನಗಳ ಕಳೆದರೂ ಇಲ್ಲಿಯವರೆಗೆ ನಾಪತ್ತೆಯಾದ ಮೀನುಗಾರನ ಸುಳಿವು ದೊರೆತಿಲ್ಲ.
ಡಿ.1ರಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಆರು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಐವರ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಆದರೆ ಕಸ್ಬಾ ಬೆಂಗ್ರೆಯ ಅನ್ಸರ್ (32) ಸುಳಿವು ಇನ್ನೂ ದೊರೆತಿಲ್ಲ.
ಕರಾವಳಿ ಕಾವಲು ಪೊಲೀಸರ ಮೂರು ಬೋಟ್ಗಳು, ಕೋಸ್ಟ್ಗಾರ್ಡ್ ತಂಡ, ಸ್ಥಳೀಯ ಮುಳುಗು ತಜ್ಞರು, ಇತರ ಮೀನುಗಾರಿಕಾ ಬೋಟ್ಗಳು ಬೆಳಗ್ಗಿನಿಂದ ರಾತ್ರಿಯವರೆಗೆ ಹುಡುಕಾಡಿದರೂ ಅನ್ಸರ್ ಪತ್ತೆಯಾಗಿಲ್ಲ. ಶನಿವಾರವೂ ಶೋಧ ಕಾರ್ಯ ಮುಂದುವರಿಯುವ ನಿರೀಕ್ಷೆಯಿದೆ.
ಬೋಟ್ ಮುಳುಗಿದ ಪ್ರದೇಶದಲ್ಲಿ ದಿನದ 24 ಗಂಟೆಯೂ ಮೀನುಗಾರಿಕೆ ನಡೆಯುತ್ತದೆ. ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಎಲ್ಲ ಬೋಟ್ ನವರಿಗೆ ಸಂದೇಶ ರವಾನಿಸಲಾಗಿದೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.