ಅಗ್ನಿಶಾಮಕ ಇಲಾಖೆಯಲ್ಲಿ ಡಿ.20ರವರೆಗೆ ಸಕಾಲ ಸಪ್ತಾಹ
ಉಡುಪಿ, ಡಿ.14: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿ.14ರಿಂದ 20ರವರೆಗೆ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಅಗ್ನಿಶಾಮಕ ಇಲಾಖೆಯಲ್ಲಿ 5 ಸೇವೆಗಳಾದ ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ನಿರಕ್ಷೇಪಣಾ ಪ್ರಮಾಣ ಪತ್ರ, ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣದ ನಂತರದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ಕ್ಲಿಯರೆನ್ಸ್ ಪ್ರಮಾಣ ಪತ್ರ, ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರತಿಕ್ರಿಯೆ, ಅಪಘಾತ, ನೈಸರ್ಗಿಕ ವಿಪತ್ತು, ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣೆಯ ತುರ್ತು ಕರೆಗಳಿಗೆ ಪ್ರತಿಕ್ರಿಯೆ ಹಾಗೂ ಪಟಾಕಿಗಳ ಲೈಸೆನ್ಸ್ಗಾಗಿ ನಿರಕ್ಷೇಪಣಾ ಪತ್ರವನ್ನು ಸಕಾಲ ವ್ಯಾಪ್ತಿಯಲ್ಲಿ ತಂದಿದ್ದು, ಯೋಜನೆ ಪರಿಣಾಮಕಾರಿಯಾಗಿ ಅನುಷ್ಟಾನ ಗೊಳಿಸುವ ನಿಟ್ಟಿನಲ್ಲಿ ಹೊಸ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ, ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು.
ಸಪ್ತಾಹದ ಅಂತ್ಯದಲ್ಲಿ ವಿಲೇವಾರಿ ಮಾಡುವ ಅರ್ಜಿಗಳ ಕುರಿತು ಸಕಾಲ ಮಿಷನ್ಗೆ ವರದಿ ನೀಡಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು ವೆಬ್ಸೈಟ್ -https://sevasindhu.karnataka.gov.in -ರಲ್ಲಿ ಸಂಯೋಜನೆಗೊಂಡಿರುವ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.