ಹೆಜ್ಜೇನು ದಾಳಿ : ಆರು ಮಹಿಳೆಯರಿಗೆ ಗಂಭೀರ ಗಾಯ
ಕೋಟ : ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಆರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ಸಂಜೆ ಕೃಷಿ ಕಾರ್ಯದ ನಿಮಿತ್ತ ಗದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನುಗಳು ಈ ಮಹಿಳೆಯರ ಮೇಲೆ ದಾಳಿ ಮಾಡಿದ್ದು, ಐವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಅವರಲ್ಲಿ ಪ್ರೇಮ ಹಾಗೂ ಬುಡ್ಡು ಎಂಬವರಿಗೆ ಹೆಜ್ಜೇನು ಅತಿಯಾಗಿ ಕಚ್ಚಿದ ಪರಿಣಾಮ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಕಾವೇರಿ, ಪದ್ದು, ಸುಶೀಲ ಎಂಬವರು ಕೋಟೇಶ್ಚರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಚ್ಚಿ ಎಂಬವರು ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸರದ ಚಂದ್ರ ಪೂಜಾರಿ ಕದ್ರಿಕಟ್ಟು ಹಾಗೂ ಗೋವಿಂದ ಮರಕಾಲ, ಅಶೋಕ, ಮಂಜು, ಆದಿತ್ಯ, ಶ್ರೀನಿಧಿ, ನೀಲು ಎನ್ನುವರು ಗ್ರಾಮಸ್ಥರ ನೆರವಿನೊಂದಿಗೆ ಆಸ್ಪತ್ರೆಗೆ ಸ್ಥಳಾಂತರಿಸುವಲ್ಲಿ ಸಹಕರಿಸಿದರು.
ಸಾಹಸ ಮೆರೆದ ಸಿಂಚನಾ
ಜೇನು ದಾಳಿಮಾಡುತ್ತಿದ್ದಂತೆ ಕೂಗಿಕೊಂಡು ಮಹಿಳೆಯರು ಅಲ್ಲಿರುವ ಮನೆಯ ಒಳಗೆ ಹೊಗಲು ಯತ್ನಿಸಿದರು. ಅಷ್ಟರಲ್ಲಿ ಸಿಂಚನಾ ಎಂಬವರು ತನ್ನ ಜೀವವನ್ನು ಲೆಕ್ಕಿಸದೆ ಆ ಮಹಿಳೆಯ ಮೇಲೆ ಎರಗಿದ ಜೇನನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅಲ್ಲದೆ 108 ಆ್ಯಂಬುಲೇನ್ಸ್ ಕಾಲ್ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಕರಿಸಿದ್ದಾರೆ.