ಶೇ. 55ಕ್ಕಿಂತ ಅಧಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ: ನಳಿನ್ ಕುಮಾರ್
ಗ್ರಾ.ಪಂ. ಚುನಾವಣೆ
ಮಂಗಳೂರು, ಡಿ.31: ರಾಜ್ಯದಲ್ಲಿ ಇದುವರೆಗೆ ಒಟ್ಟು 29,478 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಪಕ್ಷದ ಬೆಂಬಲಿತರ ಗೆಲವು ಸುಮಾರು 40 ಸಾವಿರವರೆಗೆ ತಲುಪುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ 24,000 ಬೆಂಬಲಿತರು, 18,825 ಜೆಡಿಎಸ್ ಹಾಗೂ ಇತರೆ 9,753 ಬೆಂಬಲಿತರು ಗೆದ್ದಿದ್ದಾರೆ ಎಂದರು.
ಕೆಲವು ಕಡೆ ಕಾಂಗ್ರೆಸ್ನ್ನು ತಿರಸ್ಕಾರ ಮಾಡಿ ಎಸ್ಡಿಪಿಐ ಕಡೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ನ ಸಂಪ್ರದಾಯಿಕ ಮತಗಳೂ ಕೈ ಬಿಟ್ಟುಹೋಗಿದೆ. ಕಾಂಗ್ರೆಸ್ ಠೇವಣಿ ಉಳಿಸಿಕೊಳ್ಳಲೂ ಪರದಾಡಿದೆ ಎಂದು ಅವರು ಹೇಳಿದರು.
2020 ವರ್ಷದಲ್ಲಿ ಎಲ್ಲ ಸವಾಲುಗಳ ಮಧ್ಯೆ ಬಿಜೆಪಿ ಚುನಾವಣೆಯನ್ನು ಗೆದ್ದಿದೆ. ಈ ಚುನಾವಣೆ ಗೆಲ್ಲಲು ಬಿಜೆಪಿ ನಡೆಸಿದ ಸಂಘಟಿತ ಪ್ರಚಾರ, ಪಂಚತಂತ್ರ, ಪೇಜ್ ಪ್ರಮುಖ್, ಶಕ್ತಿ ಕೇಂದ್ರ, ಕುಟುಂಬ ಮಿಲನ್, ಗ್ರಾಮ ಸ್ವರಾಜ್ಯ ಯಾತ್ರೆ ಪರಿಣಾಮ ಬಿಜೆಪಿಗೆ ಲಾಭ ಆಗಿದೆ ಎಂದವರು ಹೇಳಿದರು.
ಉಜಿರೆಯಲ್ಲಿ ನಡೆದ ಗ್ರಾ.ಪಂ. ಚುನಾವಣಾ ಫಲಿತಾಂಶದ ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ ಕೂಗಿದ ಎಸ್ಡಿಪಿಐ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಎಸ್ಡಿಪಿಐ ಸಂವಿಧಾನ ನಿಯಮದಡಿ ನೋಂದಣಿಯಾದ ರಾಜಕೀಯ ಪಾರ್ಟಿ ಎಂದುಕೊಂಡಿದ್ದೆವು. ಆದರೆ ಈಗ ಅದು ಭಯೋತ್ಪಾದನೆಗೆ ಪೂರಕವಾಗಿ ವರ್ತಿಸುತ್ತಿದೆ ಎಂದರು.
ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ, ಸಿಎಎ ಗಲಭೆ, ಕೊಲೆ ಪ್ರಕರಣಗಳಲ್ಲಿ ಎಸ್ಡಿಪಿಐ ಪಾತ್ರ ಇದೆ. ಎಸ್ಡಿಪಿಐ ಪಕ್ಷವಾದ್ದರಿಂದ ನಿಷೇಧಿಸುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಎಸ್ಡಿಪಿಐಯ ದೇಶ ವಿರೋಧಿ ಕೃತ್ಯದ ಬಗ್ಗೆ ಚುನಾವಣಾ ಆಯೋಗ ಗಮನಿಸುತ್ತಿದೆ. ರಾಜ್ಯ ಸರ್ಕಾರ ಎಸ್ಡಿಪಿಐ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದರು.
ಪಿಎಫ್ಐ ಮುಖಂಡರ ಬಂಧನ ಆದಾಗ ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕಿ ಗಲಭೆ ಸೃಷ್ಟಿ ಮಾಡಲು ಯತ್ನಿಸಲಾಗುತ್ತದೆ. ಗಲಭೆ ಸಂಭವಿಸಿದಾಗ ಎಸ್ಡಿಪಿಐಗೂ ನಮಗೂ ಸಂಬಂಧ ಇಲ್ಲ ಎನ್ನುವ ಕಾಂಗ್ರೆಸಿಗರು, ಬಂಟ್ವಾಳ ನಗರ ಸಭೆ, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಎಸ್ಡಿಪಿಐ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ. ಇಲ್ಲಿನ ಶಾಸಕರು ಬೆಳಗ್ಗೆ ಎಸ್ಡಿಪಿಐಯನ್ನು ವಿರೋಧಿಸಿ, ರಾತ್ರಿ ಒಟ್ಟಿಗೆ ಸಭೆ ನಡೆಸುತ್ತಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಎಸ್ಡಿಪಿಐ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ದ್ವಂದ್ವ ನಿಲುವಿನ ಕಾರಣ ಅಲ್ಪಸಂಖ್ಯಾತರೇ ಕಾಂಗ್ರೆಸನ್ನು ತಿರಸ್ಕರಿಸುತ್ತಿದ್ದಾರೆ ಎಂದು ನಳಿನ್ ಹೇಳಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ, ಜಗದೀಶ ಶೇಣವ ಉಪಸ್ಥಿತರಿದ್ದರು