ಹೆಜಮಾಡಿ: ಮಹಿಳೆ ಆತ್ಮಹತ್ಯೆ
ಪಡುಬಿದ್ರಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಜಮಾಡಿ ಶಿವನಗರ ದಲ್ಲಿ ನಡೆದಿದೆ. ಶಿವನಗರದ ಭಾಸ್ಕರ ರಾವ್ ಎಂಬವರ ಜಯಲಕ್ಷ್ಮಿ ನಿವಾಸ ಮನೆಯಲ್ಲಿ ಕಳೆದ 2 ತಿಂಗಳಿಂದ ವಾಸವಿದ್ದ ಅವರ ಸಹೋದರಿ ಕುಸುಮ ಎಚ್.ರಾವ್(70) ಮನೆಯಲ್ಲಿ ಪತ್ರ ಬರೆದಿಟ್ಟು ಪಕ್ಕದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಪುತ್ತೂರಿನವರಾದ ಕುಸುಮಾ ಪತಿ 2 ವರ್ಷದ ಹಿಂದೆ ತೀರಿಕೊಂಡಿದ್ದು, ಮಕ್ಕಳಿರಲಿಲ್ಲ. ಪುತ್ತೂರಿನಲ್ಲೇ ವಾಸವಿದ್ದ ಕುಸುಮ, 2 ತಿಂಗಳ ಹಿಂದೆ ಹೆಜಮಾಡಿಯ ಸಹೋದರನ ಮನೆಗೆ ಬಂದಿದ್ದರು. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಮತ್ತು ಆಸುಪಾಸಿನವರು ಎಲ್ಲೆಡೆ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆ ಶಿವನಗರ ರೋಹಿತ್ ರಾವ್ ಎಂಬವರ ತೋಟದ ಆವರಣವಿಲ್ಲದ ಬಾವಿಯಲ್ಲಿ ಅವರ ಶವ ಕಂಡುಬಂದಿತ್ತು. ಈ ಸಂದರ್ಭ ಆಸಿಫ್ ಆಪತ್ಬಾಂಧವ ನೆರವಿನಿಂದ ಶವವನ್ನು ಮೇಲೆತ್ತಲಾಯಿತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.