ಸಂವಿಧಾನ ಬದಲಾಯಿಸದೇ ಮೀಸಲಾತಿ ವಂಚನೆಗೆ ಸಂಚು: ದಸಂಸ ಮುಖಂಡ ಶ್ಯಾಮರಾಜ್ ಬಿರ್ತಿ ಆರೋಪ
ಉಡುಪಿ, ಜ11: ಸ್ವಾತಂತ್ರ್ಯ ದೊರೆತು 65 ವರ್ಷಗಳ ಬಳಿಕ ಈ ದೇಶದಲ್ಲಿ ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅನಾಥ ಮತ್ತು ಅತಂತ್ರ ಪರಿಸ್ಥಿತಿ ಎದುರಾಗಿದೆ. ಈ ದೇಶದ ಯಾವ ಸ್ತರದಲ್ಲೂ, ಯಾವ ವ್ಯವಸ್ಥೆಯಲ್ಲೂ ನ್ಯಾಯ ಸಿಗುವ ಪರಿಸ್ಥಿತಿ ಗೋಚರಿಸುತ್ತಿಲ್ಲ.ರಕ್ತಪಾತ, ಕ್ರಾಂತಿಯ ಭಯದಿಂದ ಸಂವಿಧಾನ ವನ್ನು ಬದಲಾಯಿಸದೇ ನಿಧಾನವಾಗಿ ಮೀಸಲಾತಿಯನ್ನು ರದ್ದುಮಾಡುವ ಹುನ್ನಾರ ನಡೆಯುತ್ತಿದೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆರೋಪಿಸಿದ್ದಾರೆ.
ಉನ್ನಾವೋ, ಹತ್ರಾಸ್ ಘಟನೆಯಿಂದ ಈ ದೇಶದಲ್ಲಿ ದಲಿತ ಸಹೋದರಿ ಯರಿಗೆ ಕನಿಷ್ಠ ಬದುಕುವ ಹಕ್ಕು ಕೂಡ ಇಲ್ಲ ಎನ್ನುವುದು ಕೂಡಾ ಸಾಬೀತಾಗಿದೆ. ಹಾಗೂ ಈ ಎರಡೂ ಘಟನೆಗಳಲ್ಲಿ ಇಡೀ ಪೋಲೀಸ್ ಇಲಾಖೆ ಮತ್ತು ಸರಕಾರ ಆರೋಪಿಗಳ ಪರ ನಿಂತಿದ್ದು, ಪ್ರಭುತ್ವ ಮೇಲ್ವರ್ಗದ ಪರವೇ ಕೆಲಸ ಮಾಡುತ್ತಿರುವುದನ್ನು ಸಾಬೀತು ಪಡಿಸಿದೆ ಎಂದು ಶ್ಯಾಮರಾಜ್ ಬಿರ್ತಿ ನುಡಿದರು.
ಈ ದೇಶದ ಮೂಲನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗಗಳು ಮತ್ತು ಮುಸಲ್ಮಾನರಿಗೆ ಅವರದೇ ಸ್ವಂತ ದೇಶದ ಪೌರತ್ವ ನಿರಾಕರಿಸುವ ಸಂಚು ನಡೀತಾ ಇದೆ. ಈ ಎಲ್ಲಾ ಬೆಳವಣಿಗೆಗಳನ್ನು ಎದುರಿಸಲು ಮತ್ತು ಈ ಬೆಳವಣಿಗೆಯ ವಿರುದ್ಧ ಹೋರಾಡಲು ಮೊದಲಿಗೆ ನಾವು ಅಂಬೇಡ್ಕರ್ ಆಶಯದಂತೆ ಶಿಕ್ಷಣ ಪಡೆಯಬೇಕು. ಅನಂತರ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.
ಟೂರ್ನಿಯಲ್ಲಿ 25ನೇ ವರ್ಷದ ಅಂಬೇಡ್ಕರ್ ಟ್ರೋಫಿ ಮತ್ತು 15,000 ರೂ.ಗಳ ನಗದು ಬಹುಮಾನವನ್ನು ಯಂಗ್ಸ್ಟಾರ್ ಚಟ್ಕಲ್ ಪಾದೆ ತಂಡ ಗೆದ್ದು ಕೊಂಡರೆ, ಶೈನಿಂಗ್ಸ್ಟಾರ್ ಮುದ್ರಾಡಿ ತಂಡ ರನ್ನರ್ ಅಪ್ ಪ್ರಶಸ್ತಿ ಮತ್ತು 10 ಸಾವಿರ ರೂ. ನಗದು ಬಹುಮಾನ ಗೆದ್ದುಕೊಂಡಿತು.
ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂತೋಷ್ ಶೆಟ್ಟಿ ಬಕ್ರೆ, ಮಾಜಿ ಗ್ರಾಪಂ ಸದಸ್ಯ ವಿಶುಕುಮಾರ್, ದಸಂಸ ಹೆಬ್ರಿ ತಾಲೂಕು ಸಂಚಾಲಕ ದೇವು ಹೆಬ್ರಿ, ಸಂಘಟನಾ ಸಂಚಾಲಕ ಅಣ್ಣಪ್ಪ ಮಾಸ್ಟರ್ ಮುದ್ರಾಡಿ, ಜಯರಾಮ ಮಾಸ್ಟರ್ ಮುದ್ರಾಡಿ, ಸಂತೋಷ ಮಾಸ್ಟರ್ ಮುದ್ರಾಡಿ, ಶಿವಾನಂದ ಬಿರ್ತಿ, ಸುಂದರ ಕನ್ಯಾನ ಉಪಸ್ಥಿತರಿದ್ದರು.