ಉಜಿರೆ : ಕರ್ತವ್ಯನಿರತ ಪೊಲೀಸ್, ಹೋಮ್ಗಾರ್ಡ್ ಮೇಲೆ ಹಲ್ಲೆ ; ಮೂವರು ಸೆರೆ
ಬೆಳ್ತಂಗಡಿ : ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ತಂಡವೊಂದು ಹಲ್ಲೆ ನಡೆಸಿ, ಸಮವಸ್ತ್ರ ಹರಿದ ಘಟನೆ ಉಜಿರೆ ಜನಾರ್ದನ ದೇವಸ್ಥಾನದ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಪಿಸಿ ವೆಂಕಟೇಶ್ ಸಿ.ಬಿ ಅವರು ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಉಜಿರೆ ನಿವಾಸಿಗಳಾದ ಸಾಬು, ಮಂಜುನಾಥ, ಕಿರಣ ಮತ್ತು ನವೀನ್ ಹಲ್ಲೆ ನಡೆಸಿದವರೆಂದು ದೂರಲಾಗಿದೆ.
ವೆಂಕಟೇಶ್ ಪಿಸಿ ಮತ್ತು ಹೋಮ್ಗಾರ್ಡ್ ರಾಜಣ್ಣ ಅವರು ಸಮವಸ್ತ್ರದಲ್ಲಿ ಉಜಿರೆ ದ್ವಾರದ ಬಳಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಸ್ಥಳದಲ್ಲಿ ಸೇರಿದ ಜನರನ್ನು ಅಲ್ಲಿಂದ ಹೋಗುವಂತೆ ತಿಳಿಸಿದ್ದು, ಈ ಸಂದರ್ಭ ಆರೋಪಿತರು ಪೊಲೀಸರನ್ನು ಮತ್ತು ಸಮವಸ್ತ್ರ ವನ್ನು ನಿಂದಿಸಿ ಪೊಲೀಸರ ಕಾಲರ್ ಹಿಡಿದೆಳೆದು ಹರಿದಿರುವುದಲ್ಲದೇ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ದೂರಿದ್ದಾರೆ.
ಹಲ್ಲೆಗೆ ಒಳಗಾದ ಪೊಲೀಸರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.