ಫಾದರ್ ಮುಲ್ಲರ್ ಕಾಲೇಜಿನ ಎಂಬಿಬಿಎಸ್ ಪದವಿ ಪ್ರದಾನ
ವೃತ್ತಿ ಗೌರವ ಎತ್ತಿ ಹಿಡಿಯುವುದರೊಂದಿಗೆ ಕರ್ತವ್ಯ ನಿರ್ವಹಿಸಿ: ಯುವ ವೈದ್ಯರಿಗೆ ಡಾ.ಯಡಪಡಿತ್ತಾಯ ಸಲಹೆ
ಮಂಗಳೂರು, ಜ.16: ವೈದ್ಯಕೀಯ ವೃತ್ತಿಯು ಸಮಾಜದಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದಿದ್ದು, ವೈದ್ಯರು ತಮ್ಮ ವೃತ್ತಿ ಗೌರವವನ್ನು ಎತ್ತಿ ಹಿಡಿಯುವುದರೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಯುವ ವೈದ್ಯರಿಗೆ ಸಲಹೆ ನೀಡಿದರು.
ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ವೈದ್ಯರಾಗಿ ಹೊರ ಹೊಮ್ಮಿರುವ 111 ಮಂದಿಗೆ ಪದವಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ತನ್ನ ತನ್ನ ವೃತ್ತಿ ಮೌಲ್ಯದೊಂದಿಗೆ ಉತ್ಕೃಷ್ಟ ಸೇವೆಯನ್ನು ಒದಗಿಸುವುದೇ ವೈದ್ಯ ವೃತ್ತಿಯ ವಿಶೇಷತೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಸಂದರ್ಭ ತಾನು ಕಲಿತದ್ದನ್ನು ಸಮಾಜಕ್ಕೆ ಸೇವೆಯ ಮೂಲಕ ಹಿಂದಿರುಗಿಸುವ ಮೂಲಕ ಯುವ ವೈದ್ಯರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಜಯಪ್ರಕಾಶ್ ಆಳ್ವ ಸಂಸ್ಥೆಯ ಹಿರಿಯ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳ ಸಾಧನೆ ಕುರಿತು ಮಾಹಿತಿ ನೀಡಿ, ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪದವಿ ಪಡೆದ ವಿದ್ಯಾರ್ಥಿಗಳ ಪರವಾಗಿ ಡಾ. ಫ್ಲೋರಿಸ್ ಆ್ಯನ್ ಫ್ರಾನ್ಸಿಸ್ ಅನಿಸಿಕೆ ಹಂಚಿಕೊಂಡರು.
ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ರೆ. ಫಾ.ರಿಚರ್ಡ್ ಎ. ಕುವೆಲ್ಲೋ ಸ್ವಾಗತಿಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ. ಫಾ. ಅಜಿತ್ ಬಿ. ಮಿನೇಜಸ್ ವಂದಿಸಿದರು.
ಸಂದೀಪ್ ರಾವ್ ಕೊರಡ್ಕಲ್ಗೆ ಚಿನ್ನದ ಪದಕ
ಫಾದರ್ ಮುಲ್ಲರ್ ಸಂಸ್ಥೆಯ 2020ನೇ ಸಾಲಿನ ಅತ್ಯುತ್ತಮ ಎಂಬಿಬಿಎಸ್ ಪದವೀಧರ ಡಾ.ಸಂದೀಪ್ ರಾವ್ ಕೊರಡ್ಕಲ್ಗೆ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ಡಾನ ಚಿನ್ನದ ಪದಕ ಪ್ರದಾನ ಮಾಡಿದರು.