ಕೃಷಿ ಪದ್ದತಿ ಅಲ್ಪ ಬದಲಾವಣೆಯಿಂದ ಅಪಾರ ಲಾಭ ಸಾಧ್ಯ: ಶರ್ಮ
ಉಡುಪಿ, ಜ.18: ವೈಜ್ಞಾನಿಕ ಕೃಷಿ ಎಂದರೆ ಇನ್ನಷ್ಟು ಖರ್ಚು ಮಾಡಿ ಕೃಷಿ ಮಾಡುವುದಲ್ಲ ಅಥವಾ ಸಂಪೂರ್ಣ ಬದಲಾವಣೆ ಕೂಡಾ ಅಲ್ಲ. ಮಾಡುತ್ತಿ ರುವ ಕೃಷಿ ಪದ್ಧತಿಯಲ್ಲೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ಕೇವಲ ಶೇ.25 ಖರ್ಚಿನಲ್ಲಿ ಶೇ.75 ಲಾಭ ಪಡೆಯುವುದೇ ಆಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಜಿಲ್ಲಾ ಕೃಷಿಕ ಸಂಘ ಮಂದಾರ್ತಿ ವಲಯ ಸಮಿತಿ ವತಿಯಿಂದ ಶನಿವಾರ ಕೂಡ್ಲಿ ಉಡುಪರ ಮನೆ ವಠಾರದಲ್ಲಿ ಆಯೋಜಿಸಿದ್ದ ಲಾಭದಾಯಕ ಕೃಷಿ ಪದ್ಧತಿಗಳು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.
ಬಳಸುವ ಗೊಬ್ಬರಕ್ಕೆ ಮಳೆನೀರು, ಬಿಸಿಲು ಬೀಳದಂತೆ ರಕ್ಷಿಸುವುದು, ಬಿತ್ತನೆಗೆ ಮೊದಲು ಭತ್ತದ ಬೀಜವನ್ನು ಉಪ್ಪು ನೀರಿನಲ್ಲಿ ಅದ್ದಿ ಜೊಳ್ಳನ್ನು ಬೇರ್ಪಡಿಸುವುದು, ಪ್ರತೀವರ್ಷ ಮಳೆಗಾಲ ಮುಗಿಯುವಾಗ ತೆಂಗಿನ ಬುಡ ಬಿಡಿಸದಿ ರುವುದು, ನಿಗದಿತ ಸಮಯ ದಲ್ಲಿ ಮಿತವಾಗಿ ಗೊಬ್ಬರ ಬಳಕೆ, ಅನಗತ್ಯ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದಿರುವುದು ಕೃಷಿಯ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸಬಲ್ಲದು ಎಂದವರು ವಿವರಿಸಿದರು.
ಡಾ.ವೆಂಕಟರಮಣ ಉಡುಪ ಕೂಡ್ಲಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಾರಕೂರಿನ ನಿವೃತ್ತ ಪ್ರಾಂಶುಪಾಲ ಸೀತಾ ರಾಮ ಶೆಟ್ಟಿ ಬಾರ್ಕೂರು ಉದ್ಘಾಟಿಸಿದರು. ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಸಾಧನಾಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಹೈನುಗಾರಿಕೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿಪರ ಕೃಷಿಕ ಹಾಗೂ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಶಂಭುಶಂಕರ ರಾವ್ ಮಂದಾರ್ತಿ ಮಿಶ್ರ ಬೆಳೆಯಿಂದ ಆಗುವ ಲಾಭ ಗಳ ಮಾಹಿತಿ ನೀಡಿದರು. ಮಂದಾರ್ತಿ ವಲಯ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು.
ಕೂಡ್ಲಿ ಶ್ರೀನಿವಾಸ ಉಡುಪ, ಮಂಜಯ್ಯ ಹೆಗ್ಡೆ ಹನೇಹಳ್ಳಿ, ಬಾಬಣ್ಣ ನಾಯ್ಕಿ ಅಲ್ತಾರ್, ಸುಶೀಲ ಎಸ್. ಶೆಟ್ಟಿ ಯಡ್ತಾಡಿ, ಬಾಬು ನಾಯಕ್, ಲಕ್ಷ್ಮಣ ನಾಯಕ್, ರಾಮನಾಯಕ್ ಕೂಡ್ಲಿ, ಜಯಪ್ರಕಾಶ್ ನಾಯ್ಕಿ ಅಲ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ಸುದರ್ಶನ ಉಡುಪ ಕೂಡ್ಲಿ ಸ್ವಾಗತಿಸಿದರು. ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.