ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಲೆ ಮಾಡಿದ ಪುತ್ರ
ಬೆಳ್ತಂಗಡಿ, ಜ.18: ಯುವಕನೋರ್ವ ತನ್ನ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಶ್ರೀಧರ ಪೂಜಾರಿ (55) ಮೃತರು ಎಂದು ಗುರುತಿಸಲಾಗಿದೆ. ಅವರ ಪುತ್ರ ಹರೀಶ ( 27) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿ ಯುವತಿಯೋರ್ವಳನ್ನು ಪ್ರೀತಿಸಿ ವಿವಾಹವಾಗಿದ್ದ. ಆಕೆಯನ್ನು ಮನೆಗೆ ಕರೆ ತಂದಿರುವುದನ್ನು ತಂದೆ ವಿರೋಧಿಸಿದ್ದರೆನ್ನಲಾಗಿದೆ ಇದಕ್ಕೆ ಕೋಪಗೊಂಡು ಕುಡಿದ ಮತ್ತಿನಲ್ಲಿ ಹರೀಶ ಕಟ್ಟಿಗೆಯಿಂದ ತಂದೆಯ ತಲೆಗೆ ಹೊಡೆದಿದ್ದು, ಹಲ್ಲೆಯಿಂದ ಗಂಭೀರ ಗಾಯಗೊಂಡು ಶ್ರೀಧರ ಪೂಜಾರಿ ಸ್ಧಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಮಹಜರು ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story