ಕೋಡಿ : ಕೋಮು ಸೌಹಾರ್ದತೆಗಾಗಿ ‘ಫ್ರೆಂಡ್ಸ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ
ಕುಂದಾಪುರ, ಜ.18: ಕೋಡಿಯ ಕೋಟೆ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಕೋಮು ಸೌಹಾರ್ದತೆ ಮೂಡಿಸುವ 'ಫ್ರೆಂಡ್ಸ್ ಟ್ರೋಫಿ-2021' ಕ್ರಿಕೆಟ್ ಪಂದ್ಯಾಟವನ್ನು ಜ.16 ಮತ್ತು 17ರಂದು ಕೋಡಿಯ ಬ್ಯಾರೀಸ್ ಕ್ರೀಡಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಬ್ಯಾರೀಸ್ ಗ್ರೂಪ್ನ ಮುಖ್ಯಸ್ಥ ಸೈಯ್ಯದ್ ಮುಹಮ್ಮದ್ ಬ್ಯಾರಿ, ಶಾಸಕ ಯು.ಟಿ.ಖಾದರ್, ಉತ್ತರ ಕನ್ನಡ ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬುಂದರಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಕೋಟೇಶ್ವರದ ಜನಪ್ರತಿನಿಧಿ ಟ್ರಸ್ಟ್ನ ಅಧ್ಯಕ್ಷ ಕೃಷ್ಣಾನಂದ ಹೆಗ್ಡೆ ಕಾರ್ಯದರ್ಶಿ ಸತೀಶ್ ಕುಮಾರ್ ಅಧ್ಯಾತ್ಮ, ಮಂಗಳೂರು ಎ.ಕೆ. ಟಿಂಬರ್ನ ನಿಸಾರ್, ಜೆಡಿಎಸ್ ರಾಷ್ಟ್ರೀಯ ನಾಯಕ ಹೈದರ್ ಪರ್ತಿಪಾಡಿ, ಶ್ಯಾಮ್ ಕನ್ಸ್ಸ್ಟ್ರಕ್ಷನ್ನ ಶರೀಫ್ ಹಾಜಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ಥಳೀಯರಾದ ಹಿರಿಯ ನಾಗರಿಕರಾದ ಕೃಷ್ಣಮೂರ್ತಿ, ಕುಸ್ನಿಯಮ್ಮ, ಮನೆಮನೆಗೆ ತೆರಳಿ ಕ್ಷೌರಿಕ ವೃತ್ತಿ ನಡೆಸುತ್ತಿರುವ ನರಸಿಂಹ ಭಂಡಾರಿ, ಹಿರಿಯ ಪೋಸ್ಟ್ಮೆನ್ ಚಂದ್ರ ಗಾಣಿಗ ಎಂಬವರನ್ನು ಸನ್ಮಾನಿಸ ಲಾಯಿತು. ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಗೇಂದ್ರ ನಾಯಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದು, ಇದರಲ್ಲಿ ಕೋಡಿಯ ಟೀಂ ಸ್ಪೊರ್ಟ್ಸ್ ವಲ್ಡ್ ತಂಡವು ಪ್ರಥಮ 22,222ರೂ. ನಗದು ಹಾಗೂ ಶಾಶ್ವತ ಫಲಕ ಮತ್ತು ಮರಿಯಂ ವಾರಿಯರ್ಸ್ ತಂಡವು ದ್ವಿತೀಯ 11,111 ರೂ. ನಗದು ಹಾಗೂ ಶಾಶ್ವತ ಫಲಕ ಬಹುಮಾನ ಪಡೆದುಕೊಂಡಿತು. ಕೋಟೆ ಫ್ರೆಂಡ್ಸ್ನ ಅಧ್ಯಕ್ಷ ಹಾಗೂ ಯುವ ಉದ್ಯಮಿ ಮನ್ಸೂರ್ ಕೋಡಿ ಸ್ವಾಗತಿಸಿದರು. ಮುನಾಫ್ ಯುಸೂಫ್ ಕಾರ್ಯಕ್ರಮ ನಿರೂಪಿಸಿದರು.