ಕಾಂಗ್ರೆಸ್ ಮುಖಂಡ ಉಮರ್ ಪಜೀರ್ ನಿಧನ
ಕೊಣಾಜೆ, ಜ.22: ಕಾಂಗ್ರೆಸ್ ಪಕ್ಷದ ಮುಖಂಡ ಪಜೀರು ನಿವಾಸಿ ಉಮರ್ ಪಜೀರು(58) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಪಜೀರ್ ನ ರಹ್ಮಾನಿಯಾ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿ, ಗ್ರಾಪಂ ಮಾಜಿ ಸದಸ್ಯರಾಗಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷದ ಸೇವೆ ಸಲ್ಲಿಸುವುದರೊಂದಿಗೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪಕ್ಷದ ಹಲವು ಜವಾಬ್ದಾರಿಗಳನ್ನು ಉಮರ್ ಪಜೀರು ನಿಭಾಯಿಸಿದ್ದರು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಬ್ಯಾರಿ ಪರಿಷತ್, ಮಂಗಳೂರು ಇದರ ಸಕ್ರಿಯ ಕಾರ್ಯಕರ್ತರಾಗಿ, ಪಜೀರು ರಹ್ಮಾನಿಯ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸದಸ್ಯರಾಗಿ ಹೀಗೆ ಹಲವಾರು ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯ ಅಲ್ಪಸಂಖ್ಯಾತ ನಿಗಮದಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಪಜೀರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವಲ್ಲಿ ಇವರ ಪಾತ್ರವೂ ಪ್ರಮುಖವಾಗಿತ್ತು. ಕೆಲ ದಿನಗಳ ಹಿಂದೆ ಪಜೀರುವಿನಲ್ಲಿ ನಡೆದಿದ್ದ ಗ್ರಾಪಂ ವಿಜೇತ ಕಾಂಗ್ರೆಸ್ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಸ್ವಾಗತವನ್ನು ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು.
ಸಂತಾಪ:
ಉಮರ್ ಪಜೀರ್ ಅವರ ನಿಧನಕ್ಕೆ ಶಾಸಕ ಯು.ಟಿ.ಖಾದರ್, ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಉಪಾಧ್ಯಕ್ಷರಾದ ಹಾಜಿ ಸಿ.ಮಹಮೂದ್, ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಅಹ್ಮದ್ ಬಾಷ ತಂಙಳ್, ಕೆ.ಅಶ್ರಫ್, ಹಾಜಿ ಬಿ.ಎಂ.ಮಮ್ತಝ್ ಅಲಿ, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಖಜಾಂಚಿ ಹಾಜಿ ಮೂಸಾ ಮೊಹಿದಿನ್, ಬಿ.ಅಬೂಬಕರ್, ಸಿ.ಎಂ.ಹನೀಫ್, ಸಿ.ಎಂ.ಮುಸ್ತಫ, ಹಾಜಿ ರಿಯಾಝುದ್ಧೀನ್, ಡಿ.ಎಂ.ಅಸ್ಲಂ, ಎಂ.ಎ.ಅಶ್ರಫ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.