ಮಾದರಿ ಬದುಕು ನಮ್ಮೆಲ್ಲರದಾಗಲಿ: ನಾದ ಮಣಿನಾಲ್ಕೂರು
ಉಡುಪಿ, ಜ.23: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನುಷ್ಯ ಅನಗತ್ಯ ವಿಚಾರಗಳಿಗೇ ಹೆಚ್ಚಿನ ಗಮನ ಹರಿಸುವುದರ ಪರಿಣಾಮ ಸೋಲನ್ನು ಒಪ್ಪಿಕೊಳ್ಳಲಾರದ ಸ್ಥಿತಿ ತಲುಪಿದ್ದು, ಇಂತಹ ಹತಾಶಭಾವ ಅವನನ್ನು ಆತ್ಮಹತ್ಯೆಯಂತ ಕೃತ್ಯಗಳಿಗೆ ಪ್ರೇರೇಪಿಸುತ್ತದೆ ಎಂದು ಸಂಗೀತಗಾರ ನಾದ ಮಣಿನಾಲ್ಕೂರು ವಿಷಾದ ವ್ಯಕ್ತಪಡಿಸಿದ್ದಾರೆ.
ಕೊಕ್ಕರ್ಣೆ ಸಮೀಪದ ಬಲ್ಲೆಬೈಲುವಿನ ‘ನಂದಗೋಕುಲ’ ವೇದಿಕೆಯಲ್ಲಿ ‘ಕತ್ತಲ ಹಾಡು’ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು. ಅರೆಹೊಳೆ ಪ್ರತಿಷ್ಠಾನ ಏರ್ಪಡಿಸಿದ್ದ ಈ ಕಾರ್ಯಕ್ರಮದ ಆರಂಭದಲ್ಲಿ ಬೆಂಗಳೂರಿನ ರಂಗ ಪಯಣ ತಂಡದ ರಾಜ್ಗುರು ಹೊಸಕೋಟೆ ಮತ್ತು ಸಂಗಡಿಗರು ಹೊಸಕೋಟೆ ಶೈಲಿಯ ಜಾನಪದ ಹಾೂ ರಂಗ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಬಾಳೆಗುಂಡಿ ರಾಜಶೇಖರ್ ಭಟ್, ನಂದಗೋಕುಲದ ಪೃಥ್ವಿ ಎಸ್ ರಾವ್, ಶ್ವೇತಾ ಅರೆಹೊಳೆ, ಕಾರ್ತಿಕ್ ಬ್ರಹ್ಮಾವರ ಮುಂತಾದವರು ಉಪಸ್ಥಿತರಿದ್ದರು.