ಮುಹಮ್ಮದ್ ಬ್ಯಾರಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ ಸಾಧಕ: ಉಮರ್ ಟೀಕೆ
ಎಂಇಐಎಫ್ ವತಿಯಿಂದ ಸಂತಾಪ ಸಭೆ
ಮಂಗಳೂರು, ಜ.23: ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ ಫೆಡರೇಶನ್ (ಎಂಇಐಎಫ್) ವತಿಯಿಂದ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ದ.ಕ., ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಹಾಜಿ ಮುಹಮ್ಮದ್ ಬ್ಯಾರಿ ಅವರ ಸಂತಾಪ ಸಭೆಯನ್ನು ಶನಿವಾರ ಸಂಜೆ ಹಮ್ಮಿಕೊಳ್ಳಲಾಯಿತು.
ಎಂಇಐಎಫ್ನ ಗೌರವಾಧ್ಯಕ್ಷ ಉಮರ್ ಟೀಕೆ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಸೇವೆ ಸಲ್ಲಿಸಿದ್ದ ಎಡಪದವು ಮುಹಮ್ಮದ್ ಬ್ಯಾರಿ ಸಮಾಜಸೇವೆ, ರಾಜಕೀಯ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಅವರು ಅಪ್ಪಟ ಜಾತ್ಯತೀತ ನಿಲುವಿನ ನಿಸ್ವಾರ್ಥ ಸಮಾಜಸೇವಕ ಮತ್ತು ವಿದ್ಯಾಪ್ರೇಮಿಯಾಗಿದ್ದರು ಎಂದರು.
ಮುಹಮ್ಮದ್ ಬ್ಯಾರಿ ಹುಟ್ಟು ಹೋರಾಟಗಾರರು. ಯಾವುದೇ ಸರಕಾರ, ಅಧಿಕಾರಿ, ರಾಜಕಾರಣಿಗಳು ತಪ್ಪು ಧೋರಣೆ ಹೊಂದಿದ್ದಲ್ಲಿ ನೇರವಾಗಿಯೇ ಖಂಡಿಸುತ್ತಿದ್ದರು. ಜೊತೆಗೆ ವ್ಯಕ್ತಿಗತವಾಗಿ ಎಲ್ಲರೊಂದಿಗೂ ಆತ್ಮೀಯವಾಗಿರುವ ವ್ಯಕ್ತಿತ್ವ ಮುಹಮ್ಮದ್ ಬ್ಯಾರಿಯವರದ್ದು. ಇವರು ನೇರ, ನಿಷ್ಠುರವಾಗಿದ್ದರಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಯಿತು. ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿದ್ದಾಗ ಸರಕಾರ, ಅಧಿಕಾರಿಗಳೊಂದಿಗೆ ನೇರ ಸಂಪರ್ಕ ಸಾಧಿಸಿ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ತಿಳಿಸಿದರು.
ಕನಿಷ್ಠ ವೇತನವನ್ನು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿ ಏರಿಕೆ ಮಾಡಲಾಯಿತು. ಈ ಸಂದರ್ಭದಲ್ಲಿಯೂ ಶಿಕ್ಷಣ ಸಂಸ್ಥೆಗಳ ಪರ ವಹಿಸಿ, ಶಾಲಾ-ಕಾಲೇಜುಗಳನ್ನು ಉಳಿಸಿದ ಶ್ರೇಯಸ್ಸು ಮುಹಮ್ಮದ್ ಬ್ಯಾರಿ ಅವರದ್ದು. ಸರಕಾರ ಯದ್ವಾತದ್ವಾ ಕಾಯ್ದೆ-ಕಾನೂನು ರೂಪಿಸಿದಾಗ ಶಿಕ್ಷಣ ಸಂಸ್ಥೆಗಳ ಆಪದ್ಬಾಂಧವನಂತೆ ಕೆಲಸ ಮಾಡುತ್ತಿದ್ದರು. ಇವರದ್ದು ಸಮತೋಲನದ ನಾಯಕತ್ವ. ಇಂದಿನ ಪೀಳಿಗೆಗೂ ಮುಹಮ್ಮದ್ ಬ್ಯಾರಿ ಅವರ ದೃಢ ನಿಶ್ವಯ, ತತ್ವ, ಆದರ್ಶಗಳು ಮಾದರಿಯಾಗಿವೆ ಎಂದರು.
ಮಾಜಿ ಶಾಸಕ ಮೊಯ್ದಿನ್ ಬಾವ, ಎಂಇಐಎಫ್ನ ಉಪಾಧ್ಯಕ್ಷ ಮುಮ್ತಾಝ್ ಅಲಿ ಮಾತನಾಡಿದರು.
ಸಂತಾಪ ಸಭೆಯಲ್ಲಿ ಅಲ್ ಇಹ್ ಸಾನ್ ಮೂಳೂರು ಸ್ಕೂಲ್ನ ಕರೆಸ್ಪಾಂಡೆಂಟ್ ಮುಸ್ತಫಾ ಸಅದಿ, ಮುಹಮ್ಮದ್ ಬ್ಯಾರಿಯವರ ಸಹೋದರ ಡಾ.ಮಾಯಬ್ಬ ಬ್ಯಾರಿ, ಕುಟುಂಬದ ಸದಸ್ಯರಾದ ಇಮ್ರಾನ್ ಬ್ಯಾರಿ, ಹಸನ್ ಬ್ಯಾರಿ, ರಝಾಕ್ ಬ್ಯಾರಿ, ಕಣ್ಣೂರು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿ, ರವೀಂದ್ರ ಶೆಟ್ಟಿ, ಬರಹಗಾರ ಬಿ.ಎ. ಮುಹಮ್ಮದ್ ಅಲಿ, ಕೆ.ಪಿ. ಮುಹಮ್ಮದ್ ಪುತ್ತೂರು, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತೂರು, ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ನಂದಾ ಗಡಿಯಾರ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ರುವೈಝ್ ಕಿರಾಅತ್ ಪಠಿಸಿದರು. ಎಂಇಐಎಫ್ನ ಉಪಾಧ್ಯಕ್ಷ ಮೂಸಬ್ಬ ಬ್ಯಾರಿ ಸ್ವಾತಿಸಿದರು. ಜೊತೆ ಕಾರ್ಯದರ್ಶಿ ಮಯ್ಯದಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ. ನಝೀರ್ ಕಾರ್ಯಕ್ರಮ ನಿರೂಪಿಸಿದರು.