ಬೆಳ್ತಂಗಡಿ: ಹೋಟೇಲಿನಲ್ಲಿ ದಾಂಧಲೆ ನಡೆಸಿದ ದುಷ್ಕರ್ಮಿಗಳ ತಂಡ; ಆರೋಪ
ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿರುವ ಎಂಪೈರ್ ಹೋಟೇಲಿನಲ್ಲಿ ಶನಿವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ತಂಡವೊಂದು ನುಗ್ಗಿ ದಾಂಧಲೆ ನಡೆಸಿದ್ದಾರೆನ್ನಲಾದ ಘಟನೆ ನಡೆದಿದೆ.
ಗ್ರಾಹಕರು ಮತ್ತು ಹೋಟೇಲ್ ಸಿಬಂದಿ ನಡುವೆ ಎದ್ದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮುಂದುವರಿದ ಭಾಗವಾಗಿ ಈ ದಾಂಧಲೆ ನಡೆದಿದೆ ಎಂದು ತಿಳಿದು ಬಂದಿದೆ.
ವ್ಯಕ್ತಿಯೊಬ್ಬರನ್ನು ಉಜಿರೆ ಪೇಟೆಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹೋಟೇಲಿನ ಮೇಲೆ ಕಲ್ಲು ಎಸೆದಿದ್ದು ಹೋಟೇಲಿನ ಒಳಗೂ ಹೋಗಿ ಹಲ್ಲೆ ನಡೆಸಲಾಗಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಳ್ತಂಗಡಿ ಪೋಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಪೋಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೋಲೀಸರು ಘಟನೆಗೆ ಸಂಬಂಧಿಸಿದಂತಹ ಸಿಸಿ ಟಿವಿ ಕ್ಯಾಮೆರಾಗಳಲ್ಲಿರುವ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಗ್ರಾಹಕರು ಮತ್ತು ಹೋಟೇಲಿನವರ ನಡುವಿನ ಘರ್ಷಣೆ ಇದಾಗಿರುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಉಜಿರೆಯಲ್ಲಿ ಬಿಗು ಪೋಲೀಸ್ ಬಂದೋಬಸ್ತ್ ಮಾಡಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.