ಬೆಳ್ತಂಗಡಿ: 18 ಕೋ.ರೂ. ಕಿಂಡಿ ಅಣೆಕಟ್ಟು ಕಾಮಗಾರಿ ಶಿಲಾನ್ಯಾಸ
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಜಲಯಜ್ಞ ಕಾರ್ಯಕ್ರಮದ ಮೂಲಕ ಅಂರ್ಜಲವೃದ್ಧಿಗೆ ಯೋಜನೆ ರೂಪಿಸಿ ತಾಲೂಕಿಗೆ ಪಶ್ಚಿಮವಾಹಿನಿ ಯೋಜನೆಯಡಿ 28 ಕಿಂಡಿ ಅಣೆಕಟ್ಟು ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ನೂರಾರು ಕುಟುಂಬಗಳಿಗೆ ನೇರವಾಗಿ ಪ್ರಯೋಜನವಾದರೆ ಅಂತರ್ಜಲ ಹೆಚ್ಚುವ ಮೂಲಕ ಸಾವಿರಾರು ಕುಟುಂಬಗಳಿಗೆ ನೆರವಾಗಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಇಂದುಪಶ್ಚಿಮ ವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನ ಅರಸಿನಮಕ್ಕಿ, ಸೋಣಂದೂರು, ಹಾಗೂ ಬಳಂಜದಲ್ಲಿ ಒಟ್ಟು 14 ಕೋ.ರೂ. ಅನುದಾನದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸ್ಥಳಿಯರ ಮನವಿಗೆ ಸ್ಪಂದಿಸಿದ ಅವರು ಅರಸಿನಮಕ್ಕಿ ಉಚ್ಚಿಕಟ್ಟ ಕಿಂಡಿ ಅಣೆಕಟ್ಟು ಪ್ರದೇಶಲ್ಲಿ 100 ಮೀಟರ್ ತಡೆಗೋಡೆ ಕಾಮಗಾರಿ ಹಾಗೂ ನೆಕ್ಕರಡ್ಕ ಮಂದಿಗೆ ಅನುಕೂಲವಾಗುವಂತೆ ಚನಲ್ ನಿರ್ಮಾಣ ಮಾಡಲಾಗವುದು. ಅರಸಿನಮಕ್ಕಿ ರಸ್ತೆಯನ್ನು ಮುಂದಿನ ದಿನಗಳಲ್ಲಿ ಶಿಶಿಲವರೆಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಹತ್ಯಡ್ಕ ಪ್ರಾ.ಕೃ.ಸ.ಸಂಘ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಕೆ. ಸಾಲ್ಯಾನ್, ಸಹಾಯಕ ಎಂಜಿನಿಯರ್ ಡಾ| ಆನಂದ್, ಅರಸಿನಮಕ್ಕಿ ಗ್ರಾ.ಪಂ.ಸದಸ್ಯ ಸುಂದರ್ ಕುಮಾರ್, ಮಹಾಶಕ್ತಿ ಕೇಂದ್ರ ಪ್ರಮುಖ್ ಗಣೇಶ್, ಪ್ರ. ಕಾರ್ಯದರ್ಶಿ ಕರುಣಾಕರ್, ಗ್ರಾ.ಪಂ. ಸದಸ್ಯರಾದ ಸೌಮ್ಯಾ, ಸುಮಿತ್ರಾ, ಪ್ರೇಮಚಂದ್ರ, ಲಾವಣ್ಯ, ಶಕುಂತಲಾ ಉಪಸ್ಥಿತರಿದ್ದರು. ವೃಷಾಂಕ್ ಕಾಡಿಲ್ಕರ್ ಕಾರ್ಯಕ್ರಮ ನಿರೂಪಸಿದರು. ಶ್ರೀಕರ ಭಿಡೆ ವಂದಿಸಿದರು.
ಕಿಂಡಿ ಅಣೆಕಟ್ಟುಗಳ ವಿವರ
- ಹತ್ಯಡ್ಕ ಗ್ರಾಮದ ರಾಮಯ್ಯರ ಕಟ್ಟೆ, ಉಚ್ಚಿಕಟ್ಟ- 8 ಕೋ. ರೂ.
- ಬಳಂಜ ಗ್ರಾಮದ ಬದಿನಡೆ -3 ಕೋ.ರೂ.
- ಸೋಣಂದೂರು ಗ್ರಾಮದ ನಡ್ಜೆ -1.5 ಕೋ.ರೂ.
- ಸೋಣಂದೂರು ಗ್ರಾಮದ ಕಲ್ಲಾಟ - 1.5 ಕೋ.ರೂ.
ಫೋಟೋ: ಹತ್ಯಡ್ಕ ಗ್ರಾಮದ ಉಚ್ಚಿಕಟ್ಟ ಎಂಬಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.