ರೇಡಿಯೊ ಸಾರಂಗ್, ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ
ಮಂಗಳೂರು : ನಗರದ ವಿವಿಧ ಕಾಲೇಜುಗಳ ಸುಮಾರು 80 ಎನ್ ಎಸ್ ಎಸ್ ವಿದ್ಯಾರ್ಥಿಗಳು ರೇಡಿ ಸಾರಂಗ್ ಮತ್ತು ಟೀಮ್ ಬೊಸ್ಕಿ ಆರ್ಬ್ ಮಂಗಳವಾರ ಆಯೋಜಿಸಿದ ‘ಗಣರಾಜ್ಯೋತ್ಸವ ಪರೇಡ್ ಬೆಂಗ್ರೆ ಬೀಚ್ ನಲ್ಲಿ’ ಅಭಿಯಾನದಲ್ಲಿ ಪಾಲುಗೊಂಡು ಬೀಚ್ ಸ್ವಚ್ಛತೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ಫಾ. ಮೆಲ್ವಿನ್ ಜೆ. ಪಿಂಟೊ, ನಾವು ನಮ್ಮ ದೇಶಪ್ರೇಮವನ್ನು ಕಾರ್ಯದ ಮೂಲಕ ತೋರಿಸಬೇಕೇ ವಿನ: ಮಾತಿನಿಂದ ಅಲ್ಲ. ಯಾವಾಗ ನಾವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಸಮಾಜ ಕಟ್ಟುವಲ್ಲಿ ಸಹಕರಿಸುತ್ತೇವೆಯೋ ಆಗ ನಿಜವಾದ ದೇಶಭಕ್ತರಾಗುತ್ತೇವೆ ಎಂದರು.
ಟೀಮ್ ಬೊಸ್ಕಿ ಕಳೆದ 99 ದಿನಗಳಿಂದ ಬೀಚ್ ಕ್ಲೀನಿಂಗ್ ಅಭಿಯಾನವನ್ನು ನಡೆಸುತ್ತಾ ಬಂದಿದ್ದು, ತನ್ನ 100ನೇ ದಿನದ ಸಂಭ್ರಮವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಫಾ. ಪ್ರವೀಣ್ ಮಾರ್ಟಿಸ್ ಅವರು ಟೀಮ್ ಬೊಸ್ಕಿ ಆರ್ಬ್ ಅನ್ನು ಅಭಿನಂದಿಸಿದರು.
ಬೆಂಗ್ರೆ ವಾರ್ಡಿನ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ರೇಡಿಯೊ ಸಾರಂಗ್ ನಿರ್ದೇಶಕ ಡಾ.ಫಾ. ಮೆಲ್ವಿನ್ ಪಿಂಟೊ, ಎನ್.ಎಸ್.ಎಸ್ ಸಂಯೋಜಕ ಡಾ. ನಾಗರತ್ನ ಕೆ.ಎ. ಉಪಸ್ಥಿತರಿದ್ದರು.