‘ಕೊರಗ ತನಿಯ’ - ‘ಕೊರಗಜ್ಜೆ’ ನಾಟಕ ಕೃತಿಗಳ ಬಿಡುಗಡೆ
ಮಂಗಳೂರು, ಜ. 26: ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ವಿದ್ಯಾ ಪ್ರಕಾಶನ ಮಂಗಳೂರು ಇವುಗಳ ಸಂಯುಕ್ತಾಶ್ರಯ ದಲ್ಲಿ ನಗರದ ಕೆನರಾ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಲೇಖಕ ರಘು ಇಡ್ಕಿದು ಅವರು 21ನೇ ಮತ್ತು 22ನೇ ಕೃತಿಗಳಾದ ‘ಕೊರಗ ತನಿಯ’ ಕನ್ನಡ ನಾಟಕ ಮತ್ತು ‘ಕೊರಗಜ್ಜೆ’ ತುಳು ನಾಟಕ ಕೃತಿ ಬಿಡುಗಡೆಗೊಳಿಸಲಾಯಿತು.
ಕೃತಿ ಬಿಡುಗಡೆಗೊಳಿಸಿದ ಹಾವೇರಿಯ ಕರ್ನಾಟಕ ಜಾನಪದ ವಿ.ವಿ. ವಿಶ್ರಾಂತ ಕುಲಪತಿ, ಸಾಹಿತಿ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, ಬದುಕಿನ ಚಾರಿತ್ರಿಕ ಕಾಲ ಘಟ್ಟದಲ್ಲಿ ದುರ್ಬಲರು ಸಮಾಜದಲ್ಲಿ ಅವಕಾಶ ವಂಚಿತರಾದಾಗ ಕೊರಗತನಿಯ ನಂತಹ ವ್ಯಕ್ತಿ ಪಟ್ಟಂತಹಾ ಪಾಡು ಈ ನಾಟಕದಲ್ಲಿ ವ್ಯಕ್ತವಾಗಿದೆ. ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ನಾಟಕ ಬರೆದಿದ್ದು, ಯಾವುದೇ ಆಡಂಬರವಿಲ್ಲದೆ, ಲವಲವಿಕೆಯ ಭಾಷೆ ಹೊಂದಿದೆ ಎಂದು ಹೇಳಿದರು.
ನಾವಿಂದು ಆತಂಕದ ನಡುವೆ ಇದ್ದೇವೆ. ಕೆಲವರು ಕೊರಗಜ್ಜನ ಆರಾಧನಾ ಕೇಂದ್ರವನ್ನು ಅಪವಿತ್ರಗೊಳಿಸಿ, ದುಷ್ಕೃತ್ಯ ಮೆರೆಯು ತ್ತಿದ್ದಾರೆ. ಕೊರಗಜ್ಜನ ಕಥೆ ತಿಳಿದವರು ಇಂತಹ ಕೆಲಸ ಮಾಡಲಾರರು. ಕೊರಗಜ್ಜ ಕೇವಲ ಒಂದು ಧರ್ಮ, ಸಮಾಜಕ್ಕೆ ಸೇರಿದ ವ್ಯಕ್ತಿಯಲ್ಲ. ಇಡೀ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದರು. ಲೇಖಕ ರಘು ಇಡ್ಕಿದು ಅವರು ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ, ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಉಪಸ್ಥಿತರಿದ್ದರು.