ಸುಳ್ಯ: ಮೊಗೇರ ಸಂಘದ ಸ್ನೇಹ ಸಮ್ಮಿಲನ
ಸುಳ್ಯ, ಜೂ.19: ಸುಳ್ಯ ತಾಲೂಕು ಮೊಗೇರ ಸಂಘದ ಆಶ್ರಯದಲ್ಲಿ ಮೊಗೇರ ಬಾಂಧವರ ಸ್ನೇಹ ಮಿಲನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವು ಸುಳ್ಯದ ಅಮೃತ ಭವನದಲ್ಲಿ ನಡೆಯಿತು.
ಶಾಸಕ ಎಸ್. ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಳ್ಯದ ಅಂಬೇಡ್ಕರ್ ಭವನವನ್ನು ಹೆಚ್ಚಿನ ಅನುದಾನ ತರಿಸಿ ಅಭಿವೃದ್ಧಿಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಸುಳ್ಯ ಮೊಗೇರ ಸಂಘದ ಅಧ್ಯಕ್ಷ ಶಂಕರ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪ್ರತಿಭಾನ್ವಿತರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೀನಾಕ್ಷಿಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮುದಾಯ ಅಭಿವೃದ್ದಿಗೆ ತನ್ನ ನೆರವು ಸದಾ ಇದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ರಾಜೀವ್ಗಾಂಧಿ ಆರೋಗ್ಯ ವಿ.ವಿ. ಸದಸ್ಯ ಡಾ. ರಘು ಮಾತನಾಡಿ, ಹಿಂದೆಲ್ಲಾ ನಮಗೆ ಇಂತಹ ಪ್ರೋತ್ಸಾಹದ ಅವಕಾಶವಿರಲಿಲ್ಲ. ಈಗಿನ ಮಕ್ಕಳಿಗೆ ಯಥೇಚ್ಛ ಅವಕಾಶಗಳಿದ್ದು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಉಡುಪಿ ಹಿಂದು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಂದರ ಎಸ್., ವಿಜಯಪುರ ಇಂಡಿಯ ಕೆ.ಪಿ.ಟಿ.ಸಿ.ಎಲ್ ಅಸಿಸ್ಟೆಂಟ್ ಇಂಜಿನಿಯರ್ ಗುರುವ.ಪಿ, ತೊಡಿಕಾನ ಶಾಖಾ ಪೋಸ್ಟ್ಮಾಸ್ಟರ್, ಸಂಘದ ಗೌರವಾಧ್ಯಕ್ಷ ದೇವಪ್ಪ ಹೈದಂಗೂರು, ನಿವೃತ್ತ ಪೋಸ್ಟ್ಮಾಸ್ಟರ್ ನಂದರಾಜ ಸಂಕೇಶ, ಸುಳ್ಯ ಬಿ.ಒ ಕಛೇರಿ ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಹೊಸಗದ್ದೆ, ಸುಳ್ಯ ಮೊಗೇರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಪಲ್ಲತಡ್ಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮೊಗೇರ ಸಂಘದ ಕಾರ್ಯದರ್ಶಿ ಪ್ರಕಾಶ್ ಬಂಗ್ಲೆಗುಡ್ಡೆ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಕ , ನ್ಯಾಯವಾದಿ ಜಗದೀಶ್ ಡಿ.ಪಿ. ವಂದಿಸಿದರು. ಸವಿತಾ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.