ಭಟ್ಕಳ: ಫೆ.14ರಂದು ನವಾಯತ್ ಭಾಷಾಶಾಸ್ತ್ರೀಯ ಸಂಶೋಧನಾ ಗ್ರಂಥ ಬಿಡುಗಡೆ
ಭಟ್ಕಳ: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಮತ್ತು ಭಟ್ಕಳದ ನವಾಯತ್ ಮಹೆಫಿಲ್ ನ ಸಂಯುಕ್ತಾಶ್ರಯದಲ್ಲಿ ನವಾಯತ್ ಭಾಷೆಯ ಭಾಷಾಶಾಸ್ತ್ರೀಯ ಸಂಶೋಧನಾ ಗ್ರಂಥದ ಬಿಡುಗಡೆ ಸಮಾರಂಭ ಫೆ. 14 ರಂದು ಸಂಜೆ ಭಟ್ಕಳದ ಮುಶ್ಮಾ ಮೊಹಲ್ಲಾದ ನವಜೆ ಫಾತರ್ ಬಳಿ ನಡೆಯಲಿದೆ ಎಂದು ಭಟ್ಕಳದ ನವಾಯತ್ ಮಹೆಫಿಲ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮೋಹತೆಶಮ್ ತಿಳಿಸಿದ್ದಾರೆ.
ಅವರು ಶನಿವಾರ ಜಾಮಿಯಾ ಸ್ಟ್ರೀಟ್ ನಲ್ಲಿರುವ ನವಾಯತ್ ಮೆಹಫಿಲ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಂಶೋಧನಾ ಫೆಲೊಶಿಪ್ ಅಡಿಯಲ್ಲಿ ಶ್ರೀಮತಿ ಹರ್ಷಾ ಶಂಕರ್ ಭಟ್ ಇವರು ಕೈಗೊಂಡ ವಿಸ್ತ್ರತ ಸಂಶೋಧನಾ ಕಾರ್ಯದ ಫಲಶ್ರುತಿಯಾಗಿರುವ ಈ ಗ್ರಂಥವನ್ನು ಭಟ್ಕಳದ ನವಾಯತಿ ಮೆಹಫಿಲ್ ಅಧ್ಯಕ್ಷ ಅಬ್ದುಲ್ ರಹಮಾನ್ ಮೊಹತೆಶಮ್ ಬಿಡುಗಡೆ ಮಾಡಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲಿಯಾಸ್ ನದ್ವಿ, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಕಾರ್ಯದರ್ಶಿ ಹಾಗೂ ಹಾಂಗ್ಯೋ ಐಸ್ ಕ್ರೀಂ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ, ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕರ್ರಹ್ಮಾನ್ ಮುನಿರಿ, ವಿಶ್ವ ಕೊಂಕಣಿ ಕೇಂದ್ರದ ಸಂಶೋಧನಾ ವಿಭಾಗದ ನಿರ್ದೇಶಕ ಗುರುದತ್ತ ಬಂಟ್ವಾಳಕರ್, ಅತಿಕರ್ರಹ್ಮಾನ್ ಶಾಬಂದ್ರಿ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.