ಸಮಾಜ ಸೇವೆಯಿಂದ ವ್ಯಕ್ತಿತ್ವ ವಿಕಸನ: ಪ್ರೊ.ಪ್ರಶಾಂತ್ ನಾಯ್ಕ್
ಕೊಣಾಜೆ: ಎನ್ಎಸ್ಎಸ್ ಘಟಕದ ಉದ್ಘಾಟನೆ
ಕೊಣಾಜೆ: ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ವ್ಯಕ್ತಿತ್ವದ ವಿಕಸನದ ಒಟ್ಟಿಗೆ ಬಲಿಷ್ಠ ದೇಶ ನಿರ್ಮಾಣವಾಗುತ್ತದೆ, ಆ ಹಿನ್ನೆಲೆಯಲ್ಲಿ ಎನ್ಎಸ್ಎಸ್ ಪೂರಕವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಪ್ರಶಾಂತ್ ನಾಯಕ್ ತಿಳಿಸಿದರು.
ಅವರು 2020-21 ನೇ ಸಾಲಿನ ಸರ್ಕಾರಿ ಪ್ರೌಢಶಾಲೆ ಕೊಣಾಜೆ ಪದವು ಇಲ್ಲಿನ ಎನ್ಎಸ್ಎಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಯವರು ಶಿಸ್ತಿಗೆ ಮತ್ತೊಂದು ಹೆಸರು ಕೊಣಾಜೆ ಪ್ರೌಢಶಾಲೆ, ನಿಮ್ಮ ಎನ್ಎಸ್ಎಸ್ ಘಟಕದ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅಚ್ಯುತ ಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು.
ಕಳೆದ ವರ್ಷದ ಎನ್ಎಸ್ಎಸ್ ಸ್ವಯಂಸೇವಕರಿಗೆ ಪ್ರಶಸ್ತಿಪತ್ರ ಮತ್ತು ಪದಕ ನೀಡಿ ಗೌರವಿಸಲಾಯಿತು. ಪುಸ್ತಕ ನೀಡುವುದರ ಮೂಲಕ ಹೊಸ ಸ್ವಯಂಸೇವಕರನ್ನು ಸ್ವಾಗತಿಸಲಾಯಿತು.
ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಗಾಯನಗಳು ನಡೆದವು. ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ನಾಯಕ ವಂದಿಸಿದರು. ಕುಮಾರ ಭವಿತ್ ಪ್ರಶಸ್ತಿ ಪತ್ರ ವಾಚಿಸಿದರು. ಕುಮಾರ ವಿನಿತ್ ಕಾರ್ಯಕ್ರಮ ನಿರೂಪಿಸಿದರು.