ಮಲ್ಪೆ: ಮರಳು ಶಿಲ್ಪದ ಮೂಲಕ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ
ಮಲ್ಪೆ, ಫೆ.14: ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಉಡುಪಿ-ಮಣಿಪಾಲ, ಐ.ಎಂ.ಎ. ಉಡುಪಿ ಕರಾವಳಿ ಸಹಯೋಗದಲ್ಲಿ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಜನಜಾಗೃತಿ ಮೂಡಿಸುವ ಮರಳು ಶಿಲ್ಪವನ್ನು ಉಡುಪಿಯ ಸ್ಯಾಂಡ್ ಥೀಂ ತಂಡ ಕಲಾವಿದರು ರವಿವಾರ ಮಲ್ಪೆಕಡಲ ತೀರದಲ್ಲಿ ರಚಿಸಿದರು.
ಮಕ್ಕಳ ಮೇಲಾಗುವ ಪರಿಣಾಮದ ದೃಶ್ಯದೊಂದಿಗೆ ಬದುಕಿನಲ್ಲಿ ಭರವಸೆ ಯನ್ನು ನೀಡುವ ‘ನೀ ಒಬ್ಬಂಟಿ ಅಲ್ಲ’ ಎಂಬ ಸಂದೇಶದೊಂದಿಗೆ ರಚಿಸಲಾದ ಈ ಮರಳಶಿಲ್ಪವನ್ನು ಉದ್ಘಾಟಿಸಿದ ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮಾತನಾಡಿ, ಮದ್ಯ ವ್ಯಸನವು ವ್ಯಕ್ತಿಯನ್ನು ನಾಶ ಮಾಡುವುದಲ್ಲದೆ ಮನೆಯ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಮನೆಯವರು ಈ ಬಗ್ಗೆ ಜನಜಾೃತಿ ಇಂದಿನ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಉಮೇಶ್ ಪ್ರಭು, ರೋಟರಿ ಮಣಿಪಾಲ ಮಾಜಿ ಅಧ್ಯಕ್ಷ ರಾಜರಾಮ್ ಅರಿಗ, ನಿವೃತ್ತ ಪೊಲೀಸ್ ಅಧಿಕಾರಿ ಜನಾರ್ದನ್, ಮನೋವೈದ್ಯ ಡಾ.ವಿರುಪಾಕ್ಷ ದೇವರ ಮನೆ, ಸ್ಯಾಂಡ್ ಥೀಂ ತಂಡದ ಹರೀಶ್ ಸಾಗಾ ಮೊದಲಾದವರು ಉಪಸ್ಥಿತರಿದ್ದರು.
ಮಧ್ಯದ ಬಾಟಲಿಯ ಮದ್ಯೆ ಸಿಲುಕಿದ ಮಗು ಕಣ್ಣಿರು ಹಾಕುತ್ತ ಸಹಾಯಕ್ಕಾಗಿ ಹಾತೊರಿಯುತ್ತಿರುವುದನ್ನು ಈ ಮರಳ ಶಿಲ್ಪದಲ್ಲಿ ಬಿಂಬಿಸಲಾಗಿದೆ. ಅದೇ ರೀತಿ ಒಡೆದ ಗಾಜಿನ ಬಾಟಲಿಯಂತೆ ಛಿದ್ರಗೊಂಡಂತೆ ಮತ್ತು ಇನ್ನೊಬ್ಬಳು ಬಾಲೆ ಹತಾಶೆಯಾಗಿ ಕುಳಿತಿರುವ ದೃಶ್ಯವು ಇದರಲ್ಲಿ ಇದೆ. 3.5 ಅಡಿ ಎತ್ತರ ಮತ್ತು 7 ಅಡಿ ಅಗಲದ ಈ ಮರಳ ಶಿಲ್ಪವನ್ನು ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಜೈ ನೇರಳಕಟ್ಟೆ, ಪ್ರಸಾದ್ ರಚಿಸಿದರು.