ಈ ವರ್ಷ 6 ಸಾವಿರ ಪೊಲೀಸ್ ಸಿಬ್ಬಂದಿ ನೇಮಕ: ಬಸವರಾಜ್ ಬೊಮ್ಮಾಯಿ
ಕಾರ್ಕಳ: ರಾಜ್ಯ ಸರಕಾರ 6 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಈ ವರ್ಷ ನೇಮಕ ಮಾಡುತ್ತಿದ್ದು, ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಶನಿವಾರ ಕಾರ್ಕಳ ಪೊಲೀಸ್ ವಸತಿ ಗೃಹ ಉದ್ಘಾಟಿಸಿ ಬಳಿಕ ಮಾತನಾಡಿದರು. ಮುಂದಿನ ಮೂರು ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕಾತಿಯಾಗಲಿದೆ. ನೇಮಕಾತಿ ವೇಳೆ ಶೇ. 25 ಮಹಿಳೆಯರಿಗೆ ಮತ್ತು ಶೇ. 2 ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುವುದು ಎಂದರು.
ಪೊಲೀಸರಿಗೆ ಸಕಲ ಸೌಲಭ್ಯ
ಪೊಲೀಸರು ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಹಲವಾರು ಸವಾಲು, ಜವಾಬ್ದಾರಿಗಳ ಮಧ್ಯೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಮತ್ತವರ ಕುಟುಂಬಕ್ಕೆ ಸರಕಾರದಿಂದ ಸಕಲ ಸೌಲಭ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಇದರಿಂದ ಪೊಲೀಸರು ಹೆಚ್ಚು ದಕ್ಷತೆ, ಕಾರ್ಯಕ್ಷಮತೆ ಹೊಂದಲು ಸಾಧ್ಯವಾಗಲಿದೆ. ಸರಕಾರ ಈಗಾಗಲೇ 11 ಸಾವಿರ ಪೊಲೀಸ್ ಸಮುಚ್ಚಯ ನಿರ್ಮಾಣ ಮಾಡಿದ್ದು, ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದಲ್ಲಿ ವಸತಿ ನಿರ್ಮಾಣದಲ್ಲಿ ರಾಜ್ಯವೇ ಪ್ರಥಮ ಸ್ಥಾನದಲ್ಲಿದೆ ಎಂದು ಸಚಿವರು ಹೇಳಿದರು.
ಡ್ರಗ್ಸ್ ವಿರುದ್ಧ ಸಮರ
ರಾಜ್ಯದ ಪೊಲೀಸ್ ವ್ಯವಸ್ಥೆ ಡ್ರಗ್ಸ್ ಮಾರಾಟ, ವ್ಯಸನಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷೀಣ್ಯ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದೆ. ಡ್ರಗ್ಸ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮರ ಸಾರಿದ್ದು, ಕರ್ನಾಟಕದಲ್ಲಿ ಕಳೆದ ಹತ್ತು ವರ್ಷದಲ್ಲಿ ಸೀಝ್ ಮಾಡಿದಷ್ಟು ಪ್ರಮಾಣದ ಡ್ರಗ್ಸ್ ಅನ್ನು ನಮ್ಮ ಸರಕಾರ ಆಡಳಿತಕ್ಕೆ ಬಂದ 10 ತಿಂಗಳಲ್ಲಿ ಮಾಡಿದೆ. ಸಿಂಥೆಟಿಕ್ ಡ್ರಗ್ ಸಂಪೂರ್ಣ ನಿಯಂತ್ರಣದಲ್ಲಿದ್ದು, ಡಾರ್ಕ್ ವೆಬ್ ಭೇದಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಜಾಗೃತಿ ಮೂಡಿಸುವ ಕಾರ್ಯ
ಯುವ ಜನತೆ ದುಶ್ಚಟಗಳಿಗೆ ಬಲಿಯಾಗದಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯವಾಗಲಿದೆ. ಪೊಲೀಸ್ ಇಲಾಖೆಯೊಂದಿಗೆ ಆರೋಗ್ಯ, ಶಿಕ್ಷಣ ಇಲಾಖೆ ಕಾರ್ಯದಲ್ಲಿ ಕೈ ಜೋಡಿಸುವ ಮೂಲಕ ಯುವ ಜನತೆ ಮಾದಕ ವ್ಯಸನದಿಂದ ದೂರವುಳಿಯುವಂತೆ ಮಾಡಬೇಕಾಗಿದೆ ಎಂದರು.
ಹೆಬ್ರಿಗೆ ಪೊಲೀಸ್ ಠಾಣೆ ಮಂಜೂರು
ಶಾಸಕ ಸುನಿಲ್ ಕುಮಾರ್ ಅವರ ಮನವಿ ಮೇರೆಗೆ ಹೆಬ್ರಿಗೆ ಪೊಲೀಸ್ ಠಾಣೆ ಮಂಜೂರು ಮಾಡಲಾಗುವುದು. ಹೆಬ್ರಿಯಲ್ಲಿ ಅಗ್ನಿ ಶಾಮಕ ಠಾಣೆ ತೆರೆಯುವ ನಿಟ್ಟಿನಲ್ಲೂ ಪ್ರಯತ್ನಿಸುತ್ತೇನೆ ಎಂದು ಸಚಿವ ಬೊಮ್ಮಾಯಿ ಭರವಸೆ ನೀಡಿದರು.
ಹಿಡಿದ ಕಾರ್ಯ ಮಾಡುವುದರಲ್ಲಿ ಸುನಿಲ್ ನಿಸ್ಸೀಮ: ಬೊಮ್ಮಾಯಿ
ಸುನಿಲ್ ಕುಮಾರ್ ಹಿಡಿದ ಕಾರ್ಯ ಮಾಡುವುದರಲ್ಲಿ ನಿಸ್ಸೀಮ. ಈ ಮೂಲಕ ಓರ್ವ ಮಾದರಿ ಶಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವ ಬೊಮ್ಮಾಯಿ ಗುಣಗಾನ ಮಾಡಿದರು.
ನಿರಂತರ ಅಭಿವೃದ್ಧಿ ಕಾರ್ಯ- ಸುನಿಲ್ ಕುಮಾರ್
ಕಾರ್ಕಳದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. 9.29 ರೂ. ವೆಚ್ಚದಲ್ಲಿ 45 ಪೊಲೀಸ್ ವಸತಿಗೃಹ ನಿರ್ಮಾಣಗೊಂಡಿದೆ. ಸದ್ಯದಲ್ಲೇ ಇ ಲೈಬ್ರರಿ ಉದ್ಘಾಟನೆಗೊಳ್ಳಲಿದೆ. 1.5 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಪಂಚಾಯತ್, 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಮುಂದಿನ ವಾರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಸಿಇಒ ನವೀನ್ ಭಟ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜನಾ ಯು.ಜಿ. ಪ್ರಾರ್ಥಿಸಿ, ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸ್ವಾಗತಿಸಿದರು. ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ಪ್ರಾಸ್ತವಿಕ ಮಾತುಗಳನ್ನಾಡಿದರು. ನಿರಂಜನ್ ಜೈನ್ ನಿರೂಪಿಸಿ, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ವಂದಿಸಿದರು.