ಫರಂಗಿಪೇಟೆ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಲೋಕಾರ್ಪಣೆ, ರಕ್ತದಾನ ಶಿಬಿರ
ಫರಂಗಿಪೇಟೆ, ಫೆ.21: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಫರಂಗಿಪೇಟೆ ಇದರ ಲೋಕಾರ್ಪಣೆ ಮತ್ತು ಮರ್ಹೂಮ್ ಕೆ.ಎಂ.ಶರೀಫ್ ಸ್ಮರಣಾರ್ಥ ಹಾಗೂ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಕೆಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಫರಂಗಿಪೇಟೆಯ ಬರ್ಕೆ ಕಾಂಪ್ಲೆಕ್ಸ್ ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಅಧ್ಯಕ್ಷ ರವೂಫ್ ಪೇರಿಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲ್ ಮಾತನಾಡಿ, ಅಗತ್ಯ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯನ್ನು ಪೂರೈಸಲು ಗ್ರಾಮೀಣ ಮಟ್ಟದಲ್ಲಿ ಸಂಘಟಿತ ಸೇವೆ ನೀಡಲು ಮತ್ತು ರಕ್ತದಾನ ಮಾಡಲು ಪ್ರೇರಣೆ ನೀಡುವ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಆರಂಭಿಸಲಾಗಿದೆ ಎಂದರು.
ಅಮೆಮ್ಮಾರ್ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂ ಸ್ವಾಲಿಹ್ ಉಸ್ತಾದ್ ದುಆಗೈದರು. ಕುಂಪನಮಜಲ್ ಮಸೀದಿಯ ಅಧ್ಯಕ್ಷ ಬುಖಾರಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯರಾದ ನಝೀರ್ ಕುಂಜತ್ಕಳ, ರಕ್ತನಿಧಿ ಅಧಿಕಾರಿ ಕಾಶಿಯಾ, ಸೈಯದ್ ಬಾವ, ಫರಂಗಿಪೇಟೆ ಮಸೀದಿಯ ಕಾರ್ಯದರ್ಶಿ ಅಬೂಬಕರ್ ಕೆ.ಎಚ್, ಎಸ್ ಡಿಪಿಐ ಮುಖಂಡರಾದ ಸುಲೈಮಾನ್ ಉಸ್ತಾದ್, ಇಕ್ಬಾಲ್ ಅಮೆಮ್ಮಾರ್ ಈ ಸಂದರ್ಭ ಉಪಸ್ಥಿತರಿದ್ದರು.
ಲೈಫ್ ಕೇರ್ ಹೆಲ್ತ್ ಕೇರ್ ಹೆಲ್ತ್ ಸೆಂಟರ್ ಫರಂಗಿಪೇಟೆ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ರಮೀಝ್ ಅರ್ಕುಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಕೋವಿಡ್ -19 ಸವಾಲಿನ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಯಾವುದೇ ಅಂಜಿಕೆ ಇಲ್ಲದೆ ಸೇವೆ ನೀಡಿದ ಫರಂಗಿಪೇಟೆಯ ಸುರಕ್ಷಾ ಕ್ಲಿನಿಕ್ ನ ಡಾ.ಪ್ರಭಾಕರ್ ರೈ ಮತ್ತು ರಾಜ್ಯ ಮಟ್ಟದ ಓಪನ್ ಚಾಲೆಂಜ್ ಬಾಕ್ಸಿಂಗ್-2021 ರಲ್ಲಿ ಚಿನ್ನದ ಪದಕ ವಿಜೇತರಾದ ಮುಹಮ್ಮದ್ ಮುಸ್ತಫ ಸುಜೀರ್ ಬದಿಗುಡ್ಡೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.