ಸಚಿವರಿಗೆ ಗಿಲ್ನೆಟ್ ಮೀನುಗಾರರ ಸಂಘ ಮನವಿ
ಮಂಗಳೂರು, ಫೆ.23: ಆರ್ಥಿಕವಾಗಿ ಹಿಂದುಳಿದ ಮೀನುಗಾರರಿಗೆ ರಾಜ್ಯ ಸರಕಾರವು ಈ ಹಿಂದೆ ಘೋಷಿಸಿದಂತೆ ಸಬ್ಸಿಡಿ ದರದ ಸೀಮೆಎಣ್ಣೆ ವಿತರಣಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ದ.ಕ.ಜಿಲ್ಲಾ ಗಿಲ್ನೆಟ್ ಮೀನುಗಾರರ ಸಂಘ ಮಂಗಳವಾರ ಮನವಿ ಸಲ್ಲಿಸಿದೆ.
ಬಂದರ್ ದಕ್ಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರಿಗೆ ಸಂಘದ ಅಧ್ಯಕ್ಷ ಅಲಿ ಹಸನ್ ನೇತೃತ್ವದ ತಂಡವು ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಸುಮಾರು 1322 ಮೀನುಗಾರಿಕಾ ದೋಣಿ ಮೀನುಗಾರಿಕೆ ನಡೆಸುತ್ತಿದೆ. ನಾಡದೋಣಿ ಮೀನುಗಾರಿಕೆಯಿಂದ ಸುಮಾರು 50 ಸಾವಿರ ಮೀನುಗಾರರ ಕುಟುಂಬವು ಜೀವನ ಸಾಗಿಸುತ್ತಿದೆ. ಪ್ರತೀ ದೋಣಿಗೆ 200 ಲೀ.ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗು ತ್ತಿತ್ತು. ಆದರೆ ಕಳೆದ 2 ವರ್ಷದಿಂದ ಈ ಸಬ್ಸಿಡಿ ವ್ಯವಸ್ಥೆಯನ್ನು ಕಡಿತಗೊಳಿಸಲಾಗಿದೆ. ಕೊರೋನ ಅವಧಿಯಲ್ಲಿ ಮೀನುಗಾರರು ಕಂಗೆಟ್ಟಿದ್ದು, ಇದೀಗ ಮೀನುಗಾರಿಕೆ ನಡೆಸಲು ಅವಕಾಶವಿದ್ದರೂ ಕೂಡ ಕಳೆದ ಅಕ್ಟೋಬರ್ ಬಳಿಕ ಸುಮಾರು 500ರಷ್ಟು ಪರ್ಮಿಟ್ಗಳಿಗೆ ಸಬ್ಸಿಡಿ ದರದ ಸೀಮೆಎಣ್ಣೆ ಸಿಗದ ಕಾರಣ ಸಮಸ್ಯೆ ಬಿಗಡಾಯಿಸಿದೆ. ನಾಡದೋಣಿ ಮೀನುಗಾರರು ಸೀಮೆಎಣ್ಣೆಯಿಂದಲೇ ಮೀನುಗಾರಿಕೆ ನಡೆಸುತ್ತಿವೆ. ಹಾಗಾಗಿ ವರ್ಷಪೂರ್ತಿ 400 ಲೀಟರ್ ಸೀಮೆಎಣ್ಣೆಯನ್ನು ಸಬ್ದಿಡಿ ದರದಲ್ಲಿ ನೀಡಬೇಕು ಎಂದು ಒತ್ತಾಯಿಸಿದೆ.