ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಫೆ.23: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮಹಾಸಭೆಯು ಇತ್ತೀಚೆಗೆ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರಗಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಟಿ.ಕೆ.ಉಮರ್ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಂದ ನಡೆಸಲ್ಪಡುವ ಶಾಲೆಗಳಲ್ಲಿ ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನೂ ದಾಖಲಿಸಿ ರಾಷ್ಟ್ರೀಯ ಭಾವೈಕ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಹಾಗೂ ಕಲಿಕೆಯಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಬಾಲಕರನ್ನು ಮುಂದಕ್ಕೆ ತರುವ ತಂತ್ರಗಾರಿಕೆಯನ್ನು ಹಮ್ಮಿಕೊಳ್ಳಲು ಕರೆ ನೀಡಿದರು.
ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಸ್ವಾಗತಿಸಿದರು. ಮುಸ್ತಫಾ ಸಅದಿ ಮೂಳೂರ್ ದುಆಗೈದರು. ಇತ್ತೀಚೆಗೆ ನಿಧನರಾದ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಬ್ಯಾರಿಗೆ ಸಂತಾಪ ಸೂಚಿಸಲಾಯಿತು. ಪ್ರಭಾರ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಪ್ರಾಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್ ಹಾಗೂ ಜೊತೆ ಕಾರ್ಯದರ್ಶಿ ಬಿ.ಮಯ್ಯದ್ದಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಹಾಗೂ ದ.ಕ.ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಭರತ್ ಕುಮಾರ್ ಪ್ರಸಕ್ತ ವರ್ಷ ಸರಕಾರದಿಂದ ಬಂದ ಆದೇಶಗಳಲ್ಲಿ ಮುಖ್ಯವಾಗಿ ಶಾಲಾ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳ ಬಗ್ಗೆ ಮಾಹಿತಿ ನೀಡಿದರು.
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಟಿ.ಕೆ.ಉಮರ್, ಗೌರವ ಸಲಹೆಗಾರರಾಗಿ ಸಯ್ಯದ್ ಬ್ಯಾರಿ, ಅಧ್ಯಕ್ಷರಾಗಿ ಮೂಸಬ್ಬ ಪಿ.ಬ್ಯಾರಿ, ಉಪಾಧ್ಯಕ್ಷರಾಗಿ ಬಿ.ಎಂ.ಮುಮ್ತಾಝ್ ಅಲಿ (ಕೇಂದ್ರ ವಲಯ), ಅಬ್ದುಲ್ ರಹಿಮಾನ್ ಮಣಿಪಾಲ (ಉತ್ತರ ವಲಯ), ಕೆ.ಎಂ.ಮುಸ್ತಫಾ ಸುಳ್ಯ (ಪೂರ್ವ ವಲಯ), ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ.ನಝೀರ್, ಜೊತೆ ಕಾರ್ಯದರ್ಶಿಗಳಾಗಿ ಬಿ. ಮಯ್ಯದ್ದಿ ಎನ್ಎಂಪಿಟಿ (ಆಡಳಿತ), ಮುಹಮ್ಮದ್ ರಿಯಾಝ್ ಕಣ್ಣೂರ್ (ಕಾರ್ಯಕ್ರಮ), ಪಿ.ಎ.ಇಲ್ಯಾಸ್ ಕಾಟಿಪಳ್ಳ (ಮಾಧ್ಯಮ), ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ತೊಕ್ಕೊಟ್ಟು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೀನ್ ಅಹ್ಸನ್ ಬಂಟ್ವಾಳ, ಶಾಬಿಹ್ ಅಹ್ಮದ್ ಕಾಝಿ ಉಡುಪಿ, ಬಿ.ಎ.ಇಕ್ಬಾಲ್ ಕೃಷ್ಣಾಪುರ, ನಿಸಾರ್ ಫಕೀರ್ ಮುಹಮ್ಮದ್ ಮಂಗಳೂರು, ಸಿರಾಜ್ ಮನೆಗಾರ ಜೋಕಟ್ಟೆ, ಯು.ಕೆ.ಇಬ್ರಾಹೀಂ ಉಳ್ಳಾಲ ಆಯ್ಕೆಯಾದರು.