ಫೆ. 26ರಂದು ಮೋಡರ್ನ್ ಮಹಾಭಾರತ ಸಿನೆಮಾ ಬಿಡುಗಡೆ
ಕುಂದಾಪುರ, ಫೆ.23: ಎಸ್.ವಿ.ಫಿಲ್ಮ್ ಪ್ರೊಡಕ್ಷನ್ಸ್ನವರ ಚೊಚ್ಚಲ ಸಿನಿಮಾ ‘ಮೋಡರ್ನ್ ಮಹಾಭಾರತ’ ಫೆ.26ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಲ್ಟಿಪ್ಲೆಕ್ಸ್ ಥಿಯೇಟರ್ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಿನೆಮಾ ನಿರ್ದೇಶಕ ಕೋಟೇಶ್ವರದ ಶ್ರೀಧರ ಉಡುಪ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನೆಮಾ ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆ ಗೊಳ್ಳಲಿದೆ. ಫೆ.28ರಂದು ಮಧ್ಯಾಹ್ನ 3.15ಕ್ಕೆ ಕೋಟೇಶ್ವರದ ಭಾರತ್ ಸಿನಿಮಾಸ್ನಲ್ಲಿ ಆಹ್ವಾನಿತರಿಗಾಗಿ ಪ್ರೀಮಿಯಂ ಶೋ ಏರ್ಪಡಿಸಲಾಗಿದೆ. ಇದನ್ನು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಉದ್ಘಾಟಿಸಲಿರುವರು ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೋಟ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ.ಕುಂದರ್ ಮುಖ್ಯ ಅತಿಥಿ ಗಳಾಗಿರುವರು. ರಾಷ್ಟ್ರಪತಿಗಳ ರಜತಕಮಲ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿಯವರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಮೂರು ಸಂಸಾರಗಳ ವಿಷಯ ಹೊಂದಿರುವ ಈ ಸಿನಿಮಾದ ಕತೆಯೂ ಮಹಾಭಾರತದಂತೆ ಎಲ್ಲ ಆಯಾಮಗಳನ್ನೂ ಹೊಂದಿದೆ. ಈ ಸಿನೆಮಾ ಬಿಡುಗಡೆಯ ಪೂರ್ವದಲ್ಲಿಯೇ 3 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ. ಚಿತ್ರದ ಕಲಾ ನಿರ್ದೇಶಕರಾಗಿ ನೀನಾಸಂ ಶಿವಶಂಕರ್, ಛಾಯಾ ಗ್ರಾಹಕರಾಗಿ ನವೀನ್ ಸೂರ್ಯ, ಸಂಕಲನಕಾರರಾಗಿ ಉಮೇಶ್ ಆರ್.ಬಿ., ಕಾರ್ಯನಿರ್ವಹಿಸಿದ್ದಾರೆ. ಹಿರಿಯ ನಟ ಮಂಜುನಾಥ್ ಹೆಗಡೆ, ಪ್ರಕಾಶ್ ಹೆಗ್ಗೋಡು, ನಂಜುಂಡ ಮೈಮ್ ತಾರಾಗಣಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಕುಮಾರ್ ಶೆಟ್ಟಿ, ನಾಗರಾಜ ಬೀಜಾಡಿ ಉಪಸ್ಥಿತರಿದ್ದರು.