ಕಿದಿಯೂರಿನಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ
ಉಡುಪಿ, ಫೆ.25: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟಿನ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ಕಿದಿಯೂರಿನ ಶ್ರೀವಿದ್ಯಾ ಸಮುದ್ರ ತೀರ್ಥ ಪ್ರೌಢ ಶಾಲೆಯಲ್ಲಿ ಜರಗಿತು.
ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ರಾಧಾಕೃಷ್ಣ ಆಚಾರ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಂಸನೆ ಮಾಡಿದರು. ಉದ್ಯಮಿ ಕಿದಿಯೂರಿನ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ಮುಂದಿನ ಪೀಳಿಗೆಯ ಮಕ್ಕಳಿಗೆ ಯಕ್ಷಗಾನ ನಾಟ್ಯ ಕಲಿಸಿ ಕೊಟ್ಟು ಕೆ.ಜೆ.ಸಹೋದರರು ಯಕ್ಷಗಾನವನ್ನು ಉಳಿಸಿ ಬೆಳೆಸುವ ಕೆಲಸ ಎಂದರು.
ವಿಜಯ್ ಕುಮಾರ್ ಮುದ್ರಾಡಿ, ಖ್ಯಾತ ಸ್ತ್ರೀ ವೇಷಧಾರಿ ಕರುಣಾಕರ ಶೆಟ್ಟಿ ಶುಭ ನುಡಿದರು.ಮ್ಯಾನೇಜಿಂಗ್ ಟ್ರಸ್ಟಿ ಕೆ.ಜಿ.ಗಣೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ದರೆ, ದೀಪ್ತ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು. ಕೆ.ಜೆ.ಕೃಷ್ಣ ವಂದಿಸಿದರು. ಕೆ.ಜೆ.ಕೃಷ್ಣ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡುತಿದ್ದಾರೆ.
ರೋಹಿಣಿ ಕಪ್ಪೆಟ್ಟುಗೆ ಅಭಿನಂದನೆ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ವತಿಯಿಂದ ಕಿದಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ರೋಹಿಣಿ ಕಪ್ಪೆಟ್ಟು ಇವರನ್ನು ಅಭಿನಂದಿಸಲಾಯಿತು. ಪ್ರೊ. ರಾಧಾಕೃಷ್ಣ ಆಚಾರ್ಯ, ಕಿದಿಯೂರು ಉದಯ ಕುಮಾರ್ ಶೆಟ್ಟಿ ಇವರು ರೋಗಿಣಿ ಅವರನ್ನು ಸನ್ಮಾನಿಸಿದರು.