ಮೌರಿಸ್ ಡೇಸಾರಿಗೆ ಕವಿತಾ ಪುರಸ್ಕಾರ ಪ್ರದಾನ
ಮಂಗಳೂರು : ಕೊಂಕಣಿ ಕಾವ್ಯದ ಹಿರಿಮೆಗಾಗಿ ಅಹರ್ನಿಶಿ ದುಡಿಯುವ ಕವಿತಾ ಟ್ರಸ್ಟ್ ವಾರ್ಷಿಕವಾಗಿ ಆಚರಿಸುವ ಕಾವ್ಯ ಹಬ್ಬ ಕವಿತಾ ಫೆಸ್ತ್ನ 15ನೇ ವಾರ್ಷಿಕ ಕಾರ್ಯಕ್ರಮವು ವಿಶ್ವ ಕೊಂಕಣಿ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಕೊಂಕ್ಣಿ ಕಾವ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಕವಿ, ಪತ್ರಕರ್ತ ಮೌರಿಸ್ ಡೇಸಾ ಶಾಂತಿಪುರ ಅವರಿಗೆ ಮಥಾಯಸ್ ಕುಟುಂಬ ಕೊಡಮಾಡುವ 25,000 ರೂ. ನಗದು ಒಳಗೊಂಡ ಕವಿತಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉದ್ಯಮಿ, ಕವಿ ಟೈಟಸ್ ನೊರೊನ್ಹಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಂಡ್ರ್ಯೂ ಡಿಕುನ್ಹ ಕವಿಯ ಪರಿಚಯ ಮಾಡಿದರು. ವಿಕ್ಟರ್ ಮಥಾಯಸ್ ಸನ್ಮಾನ ಪತ್ರ ವಾಚಿಸಿದರು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಮೌರಿಸ್ ‘ಸುಮಾರು ಮೂರುವರೆ ದಶಕಗಳ ಹಿಂದೆ ಕೊಂಕಣಿಯ ಧೀಮಂತ ಕವಿ ಚಾಫ್ರಾ ಡಿಕೋಸ್ತಾ ನೇತೃತ್ವದ ತಂಡವು ಕಂಡ ಕನಸು, ಕವಿತಾ ಟ್ರಸ್ಟ್ ನೇತೃತ್ವದಲ್ಲಿ ಇಂದು ನನಸಾಗುತ್ತಿದೆ ಎಂದರು.
ವಿಮರ್ಶಕ ಹೆನ್ರಿ ಮೆಂಡೊನ್ಹಾ ಬರೆದ ಕೊಂಕಣಿ ಕಾವ್ಯೆ : ರುಪಾಂ ಆನಿ ರೂಪಕಾಂ ಪುಸ್ತಕವನ್ನು ಬಸ್ತಿ ವಾಮನ್ ಶೆಣೈ ಬಿಡುಗಡೆಗೊಳಿಸಿದರು. ಲಿಯಮ್ ಪಾಯ್ಸಿ ಕೃತಿ ಪರಿಚಯ ಮಾಡಿದರು.
ಮಕ್ಕಳಿಗೆ, ಯುವಜನರಿಗೆ ಹಾಗೂ ವಯಸ್ಕರಿಗೆ ನಡೆದ ಕವಿತಾ ವಾಚನ ಸ್ಪರ್ಧೆಯಲ್ಲಿ ವಿಜೇತರಿಗೆ ಉದ್ಯಮಿ ಜೊಸೆಫ್ ಮಥಾಯಸ್ ಬಹುಮಾನ ವಿತರಿಸಿದರು. ಟ್ರಸ್ಟ್ ಸ್ಥಾಪಕ ಮೆಲ್ವಿನ್ ರೊಡ್ರಿಗಸ್ ಈ ಸ್ಪರ್ಧೆಗಳು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ರೊನಾಲ್ಡ್ ಹಾಗೂ ರೊನಾ ನಜ್ರೆತ್ ಆಶಯಗೀತೆಯನ್ನು ಹಾಡಿದರು. ಅಧ್ಯಕ್ಷ ಕಿಶೋರ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಎವ್ರೆಲ್ ರೊಡ್ರಿಗಸ್ ವಂದಿಸಿದರು. ವೆಂಕಟೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.