ಫೆ.28ರಂದು ಕುಂಬೋಳ್ ತಂಙಳ್ ನೇತೃತ್ವದಲ್ಲಿ ಕಾಜೂರು ಉರೂಸ್ ಸಮಾರೋಪ; ಸರ್ವಧರ್ಮೀಯರ ಸಂಗಮ
ಬೆಳ್ತಂಗಡಿ; ಕಾಜೂರು ಉರೂಸ್ ಸಂಭ್ರಮದ ಸಮಾರೋಪ ಸಮಾರಂಭ ಮತ್ತು ಸರ್ವಧರ್ಮೀಯರ ಸೌಹಾರ್ದ ಸಂಗಮವು ಫೆ.28ರಂದು ನಡೆಯಲಿದೆ.
ಖ್ಯಾತ ಧಾರ್ಮಿಕ ವಿದ್ವಾಂಸ ಹಾಗೂ ಕಾಜೂರು ಕ್ಷೇತ್ರದ ಗೌರವಾಧ್ಯಕ್ಷರೂ ಆಗಿರುವ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4 ಕ್ಕೆ ನಡೆಯುವ ಸೌಹಾರ್ದ ಸಭೆಯನ್ನು ಬಿ.ಎಮ್ ಫಾರೂಕ್ ಉದ್ಘಾಟಿಸಲಿದ್ದಾರೆ. ಕಾಜೂರು ತಂಙಳ್ ಆಶಂಸ ಭಾಷಣಗೈಯ್ಯಲಿದ್ದಾರೆ.
ಕರ್ನಾಟಕ ರಾಜ್ಯ ವರ್ಕ್ಫ್ ಮಂಡಳಿ ಸದಸ್ಯ ಕಾಜೂರಿನ ಅಭಿವೃದ್ಧಿಯಲ್ಲಿ ವಿಶೇಷ ಪ್ರೋತ್ಸಾಹ ನೀಡುತ್ತಿರುವ ಮೌಲಾನಾ ಶಾಫಿ ಸಅದಿ ಬೆಂಗಳೂರು ಪ್ರಧಾನ ಅತಿಥಿಯಾಗಿರಲಿದ್ದಾರೆ. ಚೊಕ್ಕಬೆಟ್ಟು ಮಸ್ಜಿದ್ ಖತೀಬ್ ಅಝೀಝ್ ದಾರಿಮಿ ಮತ್ತು ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ. ಜೋಸೆಫ್ ವಲಿಯಪರಂಬಿಲ್ ಧರ್ಮ ಸಂದೇಶ ಭಾಷಣ ಮಾಡಲಿದ್ದಾರೆ.
ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ತಿನ ಶಾಸಕರುಗಳಾದ ಕೆ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಮಾಜಿ ಸಚಿವರಾದ ಕೆ ಗಂಗಾಧರ ಗೌಡ, ಯು.ಟಿ ಖಾದರ್ ಮತ್ತು ರಮಾನಾಥ ರೈ, ಮಾಜಿ ಶಾಸಕ ವಸಂತ ಬಂಗೇರ, ರಾಜ್ಯ ವಕ್ಫ್ ಮಂಡಳಿಯ ಆಸಿಫ್ ಅಲಿ, ಅನ್ವರ್ ಭಾಷಾ ಮತ್ತು ಯಾಕೂಬ್ ಯೂಸುಫ್ ಹೊಸನಗರ, ಜಿಲ್ಲಾ ಪೊಲೀಸ್ ಎಸ್.ಪಿ ಲಕ್ಷ್ಮೀ ಪ್ರಸಾದ್, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ಶೇಖ್ ಬಾವಾ ಹಾಜಿ ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ
ರಾತ್ರಿ ನಡೆಯುವ ಉರೂಸ್ ಸಮಾರೋಪದಲ್ಲಿ ಮೌಲೀದ್ ಪಾರಾಯಣದ ನೇತೃತ್ವವನ್ನು ಸಯ್ಯಿದ್ ಅಲವಿ ಕೋಯ ಜಮಲುಲ್ಲೈಲಿ ತಂಙಳ್ ವೆಲಿಮುಕ್ಕ್ ವಹಿಸಲಿದ್ದಾರೆ. ಲುಕ್ಮಾನುಲ್ ಹಕೀಂ ಸಖಾಫಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ. ಡಾ.ಹಝ್ರತ್ ಕಾವಳಕಟ್ಟೆ, ಜಿಲ್ಲಾ ವಕ್ಫ್ ಅಧ್ಯಕ್ಷ ಕಣಚೂರು ಮೋನು ಹಾಜಿ ಭಾಗಿಯಾಗಲಿದ್ದಾರೆ. ರಾತ್ರಿಯಿಂದ ಅನ್ಮದಾನವೂ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ತಿಳಿಸಿದ್ದಾರೆ.