ಅಡಿಕೆ ಕೃಷಿಕರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗೆ ಮನವಿ
ಮಂಗಳೂರು, ಫೆ.28: ಹಳದಿ ರೋಗ ಬಾಧೆಯಿಂದ ಸಂಕಷ್ಟಕ್ಕೀಡಾಗಿರುವ ಅಡಿಕೆ ಕೃಷಿಕರಿಗೆ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗೆ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಮತ್ತು ಸುಳ್ಯದ ಅಡಿಕೆ ಬೆಳ ಹಿತರಕ್ಷಣಾ ವೇದಿಕೆಯ ನಿಯೋಗವು ಮನವಿ ಸಲ್ಲಿಸಿದೆ.
ರಾಜ್ಯದ ಹಲವು ಕಡೆ ಅದರಲ್ಲೂ ಪ್ರಮುಖವಾಗಿ ಸುಳ್ಯ, ಕೊಪ್ಪ, ಮಡಿಕೇರಿ ಮತ್ತು ಶೃಂಗೇರಿ ತಾಲೂಕುಗಳ ಅಡಿಕೆ ಕೃಷಿಯನ್ನೇ ನುಂಗಿಹಾಕುವ ರೀತಿಯಲ್ಲಿ ಅಡಿಕೆ ತೋಟಗಳನ್ನು ತೀವ್ರವಾಗಿ ಬಾಧಿಸಿರುವ ಹಳದಿ ರೋಗವು ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಕಾಸರಗೋಡು ಮತ್ತು ದ.ಕ. ಜಿಲ್ಲೆಯ ವಿಟ್ಲದಲ್ಲಿರುವ ಸಿಪಿಸಿಆರ್ಐ ವಿಜ್ಞಾನಿಗಳು, ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲಿ ಸಂವಾದ ನಡೆಸಿದಾಗ ತೀವ್ರ ಸಂಕಷ್ಟ ಎದುರಾಗಿರುವುದು ಕಂಡು ಬಂದಿದೆ. ಇದರಿಂದ ಅಡಿಕೆ ಬೆಳೆಗಾರರು ಕುಟುಂಬವನ್ನು ಸಾಕಲು ಸಂಕಷ್ಟ ಎದುರಿಸುತ್ತಿದ್ದಾರೆ. ರೋಗ ನಿಯಂತ್ರಣಕ್ಕೆ ಯಾವುದೇ ವೈಜ್ಞಾನಿಕ ಪರಿಹಾರ ಈವರೆಗೂ ಲಭ್ಯವಿಲ್ಲದ ಕಾರಣ ಸಮಸ್ಯೆ ತೀವ್ರವಾಗಿದೆ. ಹಾಗಾಗಿ ಹಳದಿ ರೋಗದಿಂದ ಕಂಗೆಟ್ಟ ರೈತರ ಸಾಲ ಮನ್ನಾ ಮಾಡಬೇಕು, ಹೊಸ ಕೃಷಿ ಮಾಡಲು ಆರ್ಥಿಕ ನೆರವು ನೀಡಬೇಕು. ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕವಲ್ಲ ಪ್ರಾಮಾಣಿಕರಿಸಲು ತಜ್ಞ ವಿಜ್ಞಾನಿಗಳ ತಂಡ ರಚಿಸಿ ವೈಜ್ಞಾನಿಕ ಸಂಶೋಧನೆ ನಡೆಸಲು ವ್ಯವಸ್ಥೆ ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.