ಮಾ.14ರಂದು ಕೆಮ್ತೂರು ದೊಡ್ಡಣ್ಣ ಶೆಟ್ರ ಸಂಸ್ಮರಣೆ
ಉಡುಪಿ, ಮಾ.5: ತುಳುಕೂಟ ಉಡುಪಿ ವತಿಯಿಂದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮ ಮಾ.14ರ ಸಂಜೆ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ಗೀತಾಂಜಲಿ ರಂಗಮಂದಿರದಲ್ಲಿ ತುಳು ನಾಟಕ ರಂಗಭೂಮಿ ‘ನಿನ್ನೆ-ಇಂದು-ನಾಳೆ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ನಟ ಎಂ.ಎಸ್. ಭಟ್, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಹಾಗೂ ನೀನಾಸಂ ಪದವೀಧರ ಕ್ರಿಸ್ಟೋಫರ್ ಪಾಲ್ಗೊಳ್ಳಲಿದ್ದಾರೆ.
ಸಂಜೆ 5:30ಕ್ಕೆ ಮುದ್ದಣ ಮಂಟಪದಲ್ಲಿ ಸಭಾ ಕಾರ್ಯಕ್ರಮವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಉದ್ಘಾಟಿ ಸಲಿದ್ದು, ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕಲ್ತಲ್ಸಾರ್, ಶಾಸಕ ಕೆ.ರಘುಪತಿ ಭಟ್, ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕಾ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಗಂಗಾಧರ್ ಕಿದಿಯೂರು ಬರೆದ ತುಳು ಕೃತಿ ‘ಪಿಂಗಾರದ ಬಾಲೆ ಸಿರಿ’ ಬಿಡುಗಡೆಗೊಳ್ಳಲಿದೆ. ತುಳುಭಾವಗೀತೆ ಸ್ಪರ್ಧೆಯ ವಿಜೇತರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ತುಳು ಮಿನದನದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕೊನೆಯಲ್ಲಿ ಮಂಗಳೂರು ಕೈಕಂಬದ ವಿಧಾತ್ರೀ ಕಲಾವಿದೆರ ಇವರಿಂದ ‘ಒರಿಯರ್ದೊರಿ ಅಸಲ್’ ತುಳು ನಾಟಕ ಪ್ರದರ್ಶನವಿದೆ ಎಂದು ತುಳು ಕೂಟ ಉಡುಪಿ ಪ್ರಕಟಣೆ ತಿಳಿಸಿದೆ.