ಮೆಂಟಲ್ ಪ್ರತಾಪ್ ಸಿಂಹಗೆ ಮಂಗಳೂರಲ್ಲಿ ಚಿಕಿತ್ಸೆ : ಹರೀಶ್ ಕುಮಾರ್ ವ್ಯಂಗ್ಯ
ಮಂಗಳೂರು, ಮಾ.6: ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತರ ಸೇವೆ ಅನನ್ಯ. ಇಂತಹ ಕ್ರೈಸ್ತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹಗೆ ತಲೆ ಕೆಟ್ಟಿರುವಂತಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮನೆಮನೆಯಿಂದ ಚಂದಾ ಎತ್ತಿ ಮೆಂಟಲ್ ಪ್ರತಾಪ್ ಸಿಂಹ ಅವರಿಗೆ ಮಂಗಳೂರಿನ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್ ವ್ಯಂಗ್ಯವಾಡಿದ್ದಾರೆ.
ಕ್ರೈಸ್ತ ಸಮುದಾಯದ ವಿರುದ್ಧ ಸಂಸದ ಪ್ರತಾಪ್ ಸಿಂಹ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾತ ಘಟಕದಿಂದ ನಗರದ ಮಂಗಳೂರು ಮಹಾನಗರ ಪಾಲಿಕೆ ಬಳಿಯ ಗಾಂಧಿ ಪ್ರತಿಮೆ ಎದುರು ಶನಿವಾರ ಸಂಜೆ ನಡೆದ ಪತ್ರಿಭಟನಾ ಸಭೆಯಲ್ಲಿ ಮೊಂಬತ್ತಿ ಬೆಳಗಿಸಿ ಅವರು ಮಾತನಾಡಿದರು.
ಸಂಸದರು ತಮ್ಮ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಇಂತಹವರಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾನಸಿಕ ರೋಗ ವಾಸಿಯಾಗಲಿದೆ. ಇಲ್ಲದಿದ್ದರೆ ಇಂತಹ ದುಷ್ಕೃತ್ಯಗಳು ಮುಂದುವರಿಯುವ ಸಾಧ್ಯತೆ ಇದೆ. ಸಂಸತ್ನಲ್ಲಿ ಅವಿವೇಕಿ ಸಂಸದನಿಗೆ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ರಾಜ್ಯಪಾಲರು ಕೂಡಲೇ ಸಂಸದರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ ಪೂರ್ವದಿಂದಲೂ ಸರ್ವ ಧರ್ಮದವರು ಕೂಡಿ ಬಾಳುತ್ತಾ ಬಂದಿದ್ದೇವೆ. ಇಂತಹ ಸೌಹಾರ್ದವನ್ನು ಬಿಜೆಪಿ ಮೊದಲಿನಿಂದಲೂ ಒಡೆಯುತ್ತಾ ಬಂದಿದೆ. ಜಿಲ್ಲೆಯ ವಿವಿಧೆಡೆ ಕ್ರೈಸ್ತ ಧರ್ಮದ ಪ್ರತಿಮೆ ಧ್ವಂಸ, ಕ್ರೈಸ್ತರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಲೇ ಬಂದಿವೆ. ಬಿಜೆಪಿಯ ಮನೋಭಾವ, ಸರಕಾರದ ಧೋರಣೆಗಳು ಇಂತಹ ಹೇಳಿಕೆಯಿಂದ ಬಯಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಕಳೆದ ಫೆ.24ರಂದು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿಲುಬೆ ಧರಿಸಿ ಬರುವವರ ಕೆಲಸಗಳನ್ನು ಮಾಡಿಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ದೇಶದ ಐಕ್ಯತೆಗೆ ನೀಡಿದ ಬಹುದೊಡ್ಡ ಪೆಟ್ಟಾಗಿದೆ ಎಂದು ಹೇಳಿದರು.
ಸರ್ವ ಧರ್ಮದವರು ಏಕತೆಯಿಂದ ಬದುಕಿ ಬಾಳಿದ ದೇಶ ನಮ್ಮದು. ಸಂಸದರ ಬೇಜವಾಬ್ದಾರಿ ಹೇಳಿಕೆಯು ಸಹಿಸಲಸಾಧ್ಯ. ರಾಮ ರಾಜ್ಯ ನಿರ್ಮಾಣದ ಕನಸು ಕಂಡಿದ್ದ ಗಾಂಧೀಜಿಯವರ ಸಿದ್ಧಾಂತಕ್ಕೆ ಇದು ವಿರುದ್ಧವಾಗಿದೆ. ಸಂಸದರನ್ನು ಕಿತ್ತೊಗೆಯುವ ಕೆಲಸವನ್ನು ಜನತೆ ಮಾಡಬೇಕಿದೆ. ಒಡೆದು ಆಳುವ ನೀತಿಯನ್ನು ಜನಪ್ರತಿನಿಧಿಗಳು ಮಾಡಿದಲ್ಲಿ ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ವಿವಾದಾತ್ಮಕ ಹೇಳಿಕೆಯು ಸಂಸದರ ಮನಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಪ್ರಚೋದನಕಾರಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಿಸ ಬೇಕು. ಬಿಜೆಪಿಯ ಮುಖಂಡರು ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ನ ಮಹಿಳಾ ಮುಖಂಡರಾದ ಮರಿಯಂ ಥಾಮಸ್ ಮಾತನಾಡಿದರು. ಪ್ರತಿಭಟನಾ ಸಭೆಯ ನೇತೃತ್ವವನ್ನು ದ.ಕ. ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ವಹಿಸಿದ್ದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ನ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಮೇಯರ್ ಕವಿತಾ ಸನೀಲ್, ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ಕುಮಾರ್ ದಾಸ್, ಲಾರೆನ್ಸ್ ಡಿಸೋಜ, ಸಂತೋಷ್ ಶೆಟ್ಟಿ ಅಸೈಗೋಳಿ, ಸದಾಶಿವ ಶೆಟ್ಟಿ, ಬೇಬಿ ಕುಂದರ್, ರಜನೀಶ್ ಕಾಪಿಕಾಡ್, ಕಾರ್ಪೊರೇಟರ್ಗಳಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ಮಾಜಿ ಮೇಯರ್ ಹರಿನಾಥ್, ಮಾಜಿ ಉಪಮೇಯರ್ ಲ್ಯಾನ್ಸಿ ಲೋಟೊ ಪಿಂಟೊ, ಶಶಿಕಲಾ, ಸಬಿತಾ ಮಿಸ್ಕಿತ್, ವಿವೇಕ್ರಾಜ್ ಪೂಜಾರಿ, ಬಿಎಂ ಅಬ್ಬಾಸ್ ಅಲಿ, ನಜೀರ್ ಬಜಾಲ್, ಅಲಿಸ್ಟರ್ ಡಿಕುನ್ಹ, ಪ್ರಕಾಶ್ ಸಾಲಿಯಾನ್, ಸ್ಟಾನ್ಲಿ, ಮಂಗಳಮುಖಿ ಸಂಜನಾ, ಅಲ್ವಿನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
‘24 ಗಂಟೆಯಲ್ಲಿ ಪ್ರತಾಪ್ ಸಿಂಹನ ಉಚ್ಚಾಟನೆಯಾಗಲಿ
ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು, ಆ ಸಮುದಾಯಕ್ಕೆ ನೋವಾಗುವಂತೆ ಸಂಸದರು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಗೆ ಕ್ರೈಸ್ತರ ಮೇಲೆ ಗೌರವ ಇದ್ದರೆ 24 ಗಂಟೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಉಚ್ಛಾಟಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಸಂಸದರ ಹೇಳಿಕೆಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಖಂಡಿಸುತ್ತದೆ. ಕ್ರೈಸ್ತರಿಗೆ ಸೌಕರ್ಯ ನೀಡಬಾರದು ಎನ್ನುವುದನ್ನು ಸುಶಿಕ್ಷಿತ ಸಮಾಜ ಒಪ್ಪುವುದಿಲ್ಲ. ಧರ್ಮದ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಮುಂದಿನ ದಿನಗಳಲ್ಲಿ ಭಾರೀ ಅಪಾಯ ತಂದೊಡ್ಡ ಲಿದೆ. ಬಿಜೆಪಿಯು ತನ್ನ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು. ಶಾಂತಿಯುತವಾಗಿರುವುದನ್ನು ದೌರ್ಬಲ್ಯ ಎಂದು ತಿಳಿದುಕೊಂಡರೆ ಅದು ನಿಮ್ಮ ದೌರ್ಭಾಗ್ಯ. ಸರಕಾರ ಎಚ್ಚರಿಕೆಯ ನಡೆ ಇಡಬೇಕು ಎಂದು ಹೇಳಿದರು.