‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನಿಮಾ ಬಿಡುಗಡೆ
ಮಂಗಳೂರು, ಮಾ.7: ನಿಶಾನ್ ವರುಣ್ ಮೂವೀಸ್ ಬ್ಯಾನರ್ನಡಿ ತಯಾರಾಗಿರುವ ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ ‘ಪೆಪ್ಪೆರೆರೆ ಪೆರೆರೆರೆ’ ತುಳು ಚಲನಚಿತ್ರ ರವಿವಾರ ನಮ್ಮ ಕುಡ್ಲ ಟಾಕೀಸ್ನಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ ತುಳು ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ನೀಗಿಸುವ ಪ್ರಯತ್ನ ನಮ್ಮ ಕುಡ್ಲ ಟಾಕೀಸ್ ಮೂಲಕ ನೆರವೇರುತ್ತಿದೆ. ಇಂದಿನ ದಿನಗಳಲ್ಲಿ ಕುಟುಂಬದ ಅಂತರ ಜಾಸ್ತಿಯಾಗುತ್ತಿರುವ ಈ ಸಂದರ್ಭದಲ್ಲಿ ಮನೆಯಲ್ಲೇ ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸುವ ಮೂಲಕ ಎಲ್ಲರೂ ಒಟ್ಟು ಸೇರು ತ್ತಾರೆ. ಮನರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳಿಂದ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ಪ್ರಸಕ್ತ ತುಳು ಸಿನಿಮಾಗಳಿಗೆ ಥಿಯೇಟರ್ನ ಸಮಸ್ಯೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಕುಡ್ಲ ಟಾಕೀಸ್ ಮೂಲಕ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ನಿರ್ಮಾಪಕರಲ್ಲಿ ಹೊಸ ಆಶಾಭಾವನೆ ಮೂಡಿದೆ ಎಂದರು.
ಕುಡ್ಲ ಟಾಕೀಸ್ನ ಪರಿಕಲ್ಪನೆಯಿಂದ ಸಿನಿಮಾವನ್ನು ಇದೀಗ ಮನೆ ಮನೆಯಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸಬಹುದು. ತುಳು ಭಾಷೆಯನ್ನು ಉಳಿಸುವ ಮತ್ತು ತುಳು ಸಿನಿಮಾವನ್ನು ಬೆಳೆಸುವ ನಿಟ್ಟಿನಲ್ಲಿ ಕೇಬಲ್ ಆಪರೇಟರ್ಗಳ ಸಹಕಾರ ಅತೀ ಅಗತ್ಯವಾಗಿದೆ. ನಮ್ಮ ಕುಡ್ಲ ಟಾಕೀಸ್ ಮೂಲಕ ಸಿನಿಮಾ ಬಿಡುಗಡೆಯಾಗುವುದರಿಂದ ಹೊಸ ಹೊಸ ನಿರ್ಮಾಪಕರು ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಕಲಾವಿದರಿಗೆ, ತಂತ್ರಜ್ಞರಿಗೆ ಯುವ ಸಾಹಿತಿಗಳಿಗೆ ಈ ಮೂಲಕ ಅವಕಾಶ ದೊರೆಯಲಿದೆ. ನಮ್ಮ ಕುಡ್ಲ ಟಾಕೀಸ್ ಪರಿಕಲ್ಪನೆಯಿಂದ ತುಳುಚಿತ್ರರಂಗಕ್ಕೆ ವ್ಯಾಕ್ಸಿನ್ ದೊರಕಿದಂತಾಗಿದೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.
ಎ2ಎಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ನಿರ್ದೇಶಕ ನಟ ಅರ್ಜುನ್ ಕಾಪಿಕಾಡ್, ಮಾಲ್ನಾಡ್ ಇನ್ಫೋಟೆಕ್ನ ಸಿಇಒ ಹರೀಶ್ ಬಿ.ಕರ್ಕೇರ, ಸತ್ಯಜಿತ್ ಸುರತ್ಕಲ್, ವಿಶ್ವಾಸ್ದಾಸ್, ಪೆಪ್ಪೆರೆರೆ ಪೆರೆರೆರೆ ಸಿನಿಮಾದ ನಿರ್ಮಾಪಕರಾದ ನಿಶಾನ್ ಕೃಷ್ಣ ಭಂಡಾರಿ, ವರುಣ್ ಸಾಲ್ಯಾನ್, ಕುಸೇಲ್ದರಸೆ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪೆಪ್ಪೆರೆರೆ ಪೆರೆರೆರೆ ತುಳು ಚಲನ ಚಿತ್ರವು ಒಂದು ತಿಂಗಳ ಕಾಲ ಪ್ರತೀ ರವಿವಾರ ಮಧ್ಯಾಹ್ನ 1:30, ಸಂಜೆ 6, ರಾತ್ರಿ 9 ಗಂಟೆಗೆ ನಮ್ಮ ಕುಡ್ಲ ಟಾಕೀಸ್ನಲ್ಲಿ ಪ್ರದರ್ಶನ ಕಾಣಲಿದೆ.