ಎಸ್ಸಿಡಿಸಿಸಿ ಬ್ಯಾಂಕಿನ ಬೆಳುವಾಯಿ ಸ್ಥಳಾಂತರಿತ ಶಾಖೆ ಉದ್ಘಾಟನೆ
ಮೂಡುಬಿದಿರೆ : ಎಸ್ಸಿಡಿಸಿಸಿ ಬ್ಯಾಂಕ್ ಕೃಷಿ ಸಾಲವನ್ನು ಶೇ.100ರಷ್ಟು ಮರು ಪಾವತಿಸುವ ಮೂಲಕ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧಿ ಲಭ್ಯವಾಗಬೇಕೆಂಬ ಧ್ಯೇಯದೊಂದಿಗೆ ಜನರಿಕ್ ಔಷಧವನ್ನು ಒದಗಿಸಿದ್ದು ಎಸ್ಸಿಡಿಸಿಸಿ ಬ್ಯಾಂಕ್ ವತಿಯಿಂದಲೂ ಜನರಿಕ್ ಔಷಧ ಕೇಂದ್ರವನ್ನು ತೆರೆಯಲಾಗುವುದು. ರೈತರಿಗೆ ರಸಗೊಬ್ಬರದ ಕೊರತೆಯಿದ್ದು ಕೇಂದ್ರ ಸಚಿವ ಸದಾನಂದ ಗೌಡರ ಮುತುವರ್ಜಿಯಿಂದ ಹರಿಹರ ದಲ್ಲಿ ರಸಗೊಬ್ಬರ ಕಾರ್ಖಾನೆ ತೆರೆಯಲಿದ್ದು ಇದರಿಂದ ರಾಜ್ಯದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಬೆಳುವಾಯಿ ಶಾಖೆಯು ಆದ್ಯಲಕ್ಷ್ಮೀ ಕಾಂಪ್ಲೆಕ್ಸ್ ಗೆ ಸೋಮವಾರ ಸ್ಥಳಾಂತರ ಗೊಂಡಿದ್ದು ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಬಾರ್ಡ್ನಿಂದ ನೇರ ಸಾಲ ಪಡೆಯುತ್ತಿದ್ದು ಅದನ್ನು ಕೂಡಾ ಕ್ಲಪ್ತ ಸಮಯಕ್ಕೆ ಮರುಪಾವತಿಸುವ ಮೂಲಕ ಉತ್ತಮ ಸಾಧನೆ ಮಾಡುತ್ತಿದೆ. ಬ್ಯಾಂಕ್ನ ಈ ಕಾರ್ಯವೈಖರಿಯನ್ನು ಮೆಚ್ಚಿ ನಬಾರ್ಡ್ ಪ್ರತಿನಿಧಿಗಳು ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಶೀಘ್ರದಲ್ಲೇ ಬ್ಯಾಂಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದು ಬ್ಯಾಂಕ್ಗೆ ಹೆಮ್ಮೆಯ ಸಂಗತಿ ಯಾಗಿದೆ. ಈ ವರ್ಷ ಇನ್ನೂ 10 ಹೊಸ ಶಾಖೆಗಳನ್ನು ತೆರೆಯಲಾಗುವುದು ಹಾಗೂ ನವೋದಯ ಸ್ವಸಹಾಯ ಸಂಘದ 6 ಲಕ್ಷ ಸದಸ್ಯರಿಗೆ ಸಮವಸ್ತ್ರವನ್ನು ವಿತರಿಸಲಾಗುವುದು ಎಂದು ಹೇಳಿದರು.
ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಕರಾವಳಿಯ ನೆಲದಲ್ಲಿ ಹುಟ್ಟಿಕೊಂಡ ಅನೇಕ ಖಾಸಗಿ ಬ್ಯಾಂಕ್ಗಳು ರಾಷ್ಟ್ರೀಕರಣಗೊಂಡು ಗಮನಸೆಳೆದಿದೆ. ಎಸ್ಸಿಡಿಸಿಸಿ ಬ್ಯಾಂಕ್ ಕರಾವಳಿಯಲ್ಲಿ ಅಗ್ರಸ್ಥಾನ ದಲ್ಲಿದೆ. ಇದಕ್ಕೆ ಎಂ.ಎನ್.ರಾಜೇಂದ್ರ ಕುಮಾರ್ ಅವರ ಶ್ರಮ ಮತ್ತು ದೂರದೃಷ್ಟಿಯೇ ಕಾರಣವಾಗಿದೆ. ಆಪತ್ಕಾಲಕ್ಕೆ ಬ್ಯಾಂಕ್ ನಿಂದ ಸಾಲ ಪಡೆದವರು ಅದನ್ನು ಕ್ಲಪ್ತ ಸಮಯಕ್ಕೆ ಮರುಪಾವತಿಸಬೇಕು. ಇದರಿಂದ ಬ್ಯಾಂಕ್ ಅಭಿವೃದ್ಧಿ ಹೊಂದುವುದಲ್ಲದೆ ಅದರ ಲಾಭ ಗ್ರಾಹಕರಿಗೆ ಲಭಿಸಲಿದೆ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ದೀಪ ಪ್ರಜ್ವಲನಗೊಳಿಸಿ ಮಾತನಾಡಿ ಆರ್ಥಿಕ ವ್ಯವಹಾರ ಕುಸಿತ ಕಂಡಿರುವುದರಿಂದ ಸಾಲ ಮರುಪಾವತಿಸಲು ಸಮಸ್ಯೆಯಾಗುತ್ತಿದೆ. ಇಲ್ಲಿನ ಜನರು ಸ್ವಾಭಿಮಾನಿಗಳು ಮತ್ತು ಪ್ರಾಮಾಣಿಕರಾಗಿರುವುದರಿಂದ ಸಾಲ ಮರುಪಾವತಿಸುತ್ತಿದ್ದು ಇದು ಬ್ಯಾಂಕ್ಗಳ ಪ್ರಗತಿಗೆ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಳುವಾಯಿ ಸಂತ ಮಾರ್ಟಿಸ್ ಡಿಪೋರಸ್ ಚರ್ಚ್ನ ಧರ್ಮಗುರು ರೇ. ಫಾ. ಅಪೋಲಿನಾರೀಸ್ ಕ್ರಾಸ್ತಾ, ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸಲೀಂ ಶುಭ ಹಾರೈಸಿದರು.
ಹೊಸ ಗುಂಪುಗಳ ಉದ್ಘಾಟನೆ : ಹೊಸಗುಂಪುಗಳಾದ ಶಿವಾನಿ, ನಂದಾದೀಪ, ಶ್ರೀಗುರು, ದುರ್ಗಾಪರಮೇಶ್ವರಿ ಹಾಗೂ ಧನುಶ್ರೀ ನವೋದಯ ಸ್ವಸಹಾಯ ಗುಂಪುಗಳನ್ನು ಡಾ. ಎಂ.ಎನ್ ರಾಜೇಂದ್ರ ಕುಮಾರ್ ದಾಖಲೆ ಪತ್ರಗಳನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಸ್ವಸಹಾಯ ಗುಂಪುಗಳ ಸದಸ್ಯರಾದ ಫಾತಿಮಾ ಜೊಹರಾ, ಸುಮಿತ್ರ, ಯುವರಾಜ ಜೈನ್ರವರಿಗೆ ಚೈತನ್ಯ ವಿಮೆಯ ಚೆಕ್ಗಳನ್ನು ವಿತರಿಸಿದರು.
ಸನ್ಮಾನ : ರತ್ನಮಾಣಿಕ್ಯಂ ಡೆವಲಪರ್ಸ್ ವತಿಯಿಂದ ಅದರ ಪ್ರವರ್ತಕ ಪವನ್ ಬಿ.ಕೋಟ್ಯಾನ್, ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿದರು. ಬೆಳುವಾಯಿ ವ್ಯವಸಾಯಿಕ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಅಧ್ಯಕ್ಷ ಭಾಸ್ಕರ ಎಸ್ ಕೋಟ್ಯಾನ್ ಸನ್ಮಾನಿಸಿದರು. ಶಾಖಾ ಪ್ರಬಂಧಕ ಸತೀಶ್ ಶೆಟ್ಟಿ ಹಾಗೂ ಸಿಬ್ಬಂದಿಗಳನ್ನು ಎಂ.ಎನ್.ರಾಜೇಂದ್ರ ಕುಮಾರ್ ಗೌರವಿಸಿದರು.
ಬ್ಯಾಂಕ್ನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಿ., ಎಂ.ವಾದಿರಾಜ ಶೆಟ್ಟಿ, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜೋಕಿಂ ಕೊಕಿಯಾ, ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಪ್ರವೀಣ್ ಕುಮಾರ್, ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕರಿಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಅಶ್ವಿನ್ ಜೆ.ಪಿರೇರಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ ಎಸ್ ಕೋಟ್ಯಾನ್ ಸ್ವಾಗತಿಸಿ ಬೆಳುವಾಯಿ ಶಾಖೆಯ ಬೆಳವಣಿಗೆಯನ್ನು ವಿವರಿಸಿ ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ. ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.