ವಾರ್ತಾಭಾರತಿ ಸಂಪಾದಕರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ, ವಂಚನೆಗೆ ಪ್ರಯತ್ನ: ಸೈಬರ್ ಪೊಲೀಸರಿಗೆ ದೂರು
ಬೆಂಗಳೂರು, ಮಾ.11: ವಾರ್ತಾಭಾರತಿ ಕನ್ನಡ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಮಾಡಿ ಜನರನ್ನು ವಂಚಿಸುವ ಪ್ರಯತ್ನ ನಡೆದಿರುವುದು ಗುರುವಾರ ಬೆಳಕಿಗೆ ಬಂದಿದೆ.
ಫೇಸ್ ಬುಕ್ ನಲ್ಲಿರುವ ಎ.ಎಸ್ ಪುತ್ತಿಗೆಯವರ ಫೋಟೋ, ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಂಡು ಈ ಹೊಸ ನಕಲಿ ಖಾತೆ ಸೃಷ್ಟಿಸಲಾಗಿದೆ. ಬಳಿಕ ಪುತ್ತಿಗೆಯವರ ಪರಿಚಿತರಿಗೆ ಫೇಸ್ ಬುಕ್ ಮೆಸೆಂಜರ್ ಮೂಲಕ ಮೆಸೇಜ್ ಮಾಡಿ ಮೊದಲು ಕುಶಲೋಪರಿ ಮಾತನಾಡಿ ಬಳಿಕ ತುರ್ತಾಗಿ ಹಣದ ಅವಶ್ಯಕತೆ ಇದೆ. ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಕೂಡಲೇ ಪಾವತಿಸಿ ಎಂದು ಒಂದು ಮೊಬೈಲ್ ನಂಬರ್ ಕೊಡಲಾಗಿದೆ. ಜಾಗೃತ ಬಳಕೆದಾರರು ಕೂಡಲೇ ಇದನ್ನು ವಾರ್ತಾಭಾರತಿ ಗಮನಕ್ಕೆ ತಂದಿದ್ದು ಬೆಂಗಳೂರು ಸೈಬರ್ ಕ್ರೈಮ್ ವಿಭಾಗಕ್ಕೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ.
ಈ ಬಗ್ಗೆ ಅಬ್ದುಸ್ಸಲಾಮ್ ಪುತ್ತಿಗೆಯವರೂ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. " ನನ್ನ ಹೆಸರು, ಫೋಟೋ ದುರ್ಬಳಕೆ ಮಾಡಿ ನನ್ನ ಹೆಸರಿನ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ನನ್ನ ಪರಿಚಿತರಿಗೆ ಮೆಸೆಂಜರ್ ಮೂಲಕ ಮೆಸೇಜು ಕಳಿಸಿ ಹಣ ಕಳಿಸಲು ಬೇಡಿಕೆ ಇಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇಂತಹ ಯಾವುದೇ ಮೆಸೇಜನ್ನು ನಾನು ಯಾರಿಗೂ ಕಳಿಸಿಲ್ಲ. ಹಾಗಾಗಿ ಯಾರೂ ನನ್ನ ಹೆಸರಲ್ಲಿ ಬರುವ ಇಂತಹ ಮೆಸೇಜುಗಳನ್ನು ನಂಬಬೇಡಿ. ಹೀಗೆ ನನ್ನ ಹೆಸರಲ್ಲಿ ವಂಚಿಸುತ್ತಿರುವುದರ ವಿರುದ್ಧ ಬೆಂಗಳೂರು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ದಾಖಲಿಸುತ್ತಿದ್ದೇನೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನನ್ನ ಹೆಸರು, ಫೋಟೋ ದುರ್ಬಳಕೆ ಮಾಡಿ ನನ್ನ ಹೆಸರಿನ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ನನ್ನ ಪರಿಚಿತರಿಗೆ ಮೆಸೆಂಜರ್ ಮೂಲಕ ಮೆಸೇಜು ಕಳಿಸಿ ಹಣ...
Posted by Abdussalam Puthige on Wednesday, 10 March 2021