ಬಡಗುಬೆಟ್ಟು: ಮನೆಯ ಎದುರು ನಿಲ್ಲಿಸಿದ್ದ ರಿಕ್ಷಾ, ಬೈಕಿಗೆ ದುಷ್ಕರ್ಮಿಗಳಿಂದ ಬೆಂಕಿ
ಉಡುಪಿ, ಎ.6: ಎರಡು ಮನೆಗಳ ಎದುರು ನಿಲ್ಲಿಸಲಾದ ಅಟೋ ರಿಕ್ಷಾ ಹಾಗೂ ಬೈಕಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ 76ನೆ ಬಡಗುಬೆಟ್ಟು ಗ್ರಾಮದ ಬೈಲೂರು-ಎನ್ಜಿಓ ಕಾಲನಿ ಎಂಬಲ್ಲಿ ಸೋಮವಾರ ರಾತ್ರಿ ವೇಳೆ ನಡೆದಿದೆ.
ಮನೆಯ ಗೇಟಿನ ಎದುರು ನಿಲ್ಲಿಸಿದ್ದ ಅಬ್ದುಲ್ ರಶೀದ್ ಎಂಬವರ ಅಟೋ ರಿಕ್ಷಾಕ್ಕೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಇದರಿಂದ ರಿಕ್ಷಾ ಸಂಪೂರ್ಣ ಸುಟ್ಟು ಹೋಗಿ ಸುಮಾರು 2,25,000ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.
ಅದೇ ರೀತಿ ಅಲ್ಲೇ ಸಮೀಪದ ಇನ್ನೊಂದು ಮನೆಯ ಎದುರಿನ ಅಂಗಳದಲ್ಲಿ ನಿಲ್ಲಿಸಲಾದ ಹರೀಶ್ ಕುಮಾರ್ ಭಟ್ ಎಂಬವರ ಬಜಾಜ್ ಡಿಸ್ಕವರಿ ಬೈಕಿಗೆ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆನ್ನಲಾಗಿದೆ. ಮನೆಯವರು ಹೊರ ಬಾರದಂತೆ ದುಷ್ಕರ್ಮಿಗಳು ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿದ್ದರು. ಬೈಕ್ ಸಂಪೂರ್ಣ ಸುಟ್ಟು ಹೋಗಿ ಸುಮಾರು 20,000 ರೂ. ನಷ್ಟ ಉಂಟಾಗಿದೆ.
ಈ ಕೃತ್ಯಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.